ಬೆನಕಟ್ಟಿ: ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಸವದತ್ತಿ ತಾಲ್ಲೂಕಿನ ಮದ್ಲೂರ ಗ್ರಾಮದಲ್ಲಿರುವ ಚೆಕ್ ಡ್ಯಾಂ ಬಿರುಕು ಬಿಟ್ಟಿದೆ. ಇದು ಅಲ್ಲಿನ ರೈತರು ಮತ್ತು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಈ ಭಾಗದ ಜೀವನಾಡಿಯಾದ ಚೆಕ್ ಡ್ಯಾಂ ಸಂಪೂರ್ಣ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಮಳೆಯು ಹೆಚ್ಚಾದಲ್ಲಿ ಒಡೆದು ಹೋಗುವ ಲಕ್ಷಣಗಳಿವೆ ಎನ್ನುತ್ತಾರೆ ಸ್ಥಳೀಯರು.
‘ಒಡೆದಲ್ಲಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿ, ಪ್ರಾಣ ಹಾನಿ ಸಂಭವಿಸುತ್ತದೆ. ಮದ್ಲೂರ, ಬೆನಕಟ್ಟಿ, ಮಬನೂರ ಗ್ರಾಮದ ಸುಮಾರು ಸಾವಿರ ಹೆಕ್ಟೇರ್ಗೂ ಹೆಚ್ಚು ಜಮೀನು ಕೊಚ್ಚಿ ಹೋಗುತ್ತದೆ. 1996ರಲ್ಲಿ ಎಡೆಬಿಡದೆ ಸುರಿದ ಮಳೆಗೆ ಚೆಕ್ಡ್ಯಾಂ ಬಿರುಕು ಬಿಟ್ಟು ಹೊಲಗಳಿಗೆ ನುಗ್ಗಿ ಅಪಾರ ಹಾನಿಯಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಅನಾಹುತ ಆಗುವುದನ್ನು ತಪ್ಪಿಸಿಬೇಕು. ಜನರ ಆತಂಕ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ವಿಷಯ ಗಮನಕ್ಕೆ ಬಂದಿದೆ. ತಹಶೀಲ್ದಾರ್ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದು ಗ್ರಾಮ ಲೆಕ್ಕಾಧಿಕಾರಿ ಎಂ.ಎಚ್. ಚಿಕ್ಕಾಣಿ ತಿಳಿಸಿದರು.
‘ಚೆಕ್ ಡ್ಯಾಂ ನೀರು ಗ್ರಾಮಕ್ಕೆ ಹರಿದು ಬರುತ್ತಿತ್ತು. ಅದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 8 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದು ಪಿಡಿಒ ಸುರೇಶ ನಾಗೋಜಿ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.