ಮುಂಬೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮುಗಿಸಿದ ರೀತಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೂ ಮಾವೊವಾದಿಗಳು ಸಂಚು ರೂಪಿಸಿದ್ದರು ಎಂಬ ಬೆಚ್ಚಿಬೀಳುವ ವಿಷಯವನ್ನು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದೇ ಜನವರಿಯಲ್ಲಿ ನಡೆದ ಕೋರೆಗಾಂವ್–ಭೀಮಾ ಹಿಂಸಾಚಾರದಲ್ಲಿ ಮಾವೊವಾದಿಗಳ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ವೇಳೆ ಸಿಕ್ಕ ಪತ್ರದಿಂದ ಸಂಚು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ನಿಷೇಧಿತ ಸಿಪಿಐ (ಮಾವೊವಾದಿ) ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಪೊಲೀಸರು ಬುಧವಾರ ಐವರನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿಯ ದೆಹಲಿಯ ಮನೆಯಲ್ಲಿ ಶೋಧ ನಡೆಸುತ್ತಿದ್ದ ವೇಳೆ ಸಿಕ್ಕ ಪತ್ರದಲ್ಲಿ ಹತ್ಯೆಯ ಸಂಚು ತಿಳಿಯಿತು ಎಂದು ಪೊಲೀಸರು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೂಡಾ ಶುಕ್ರವಾರ ಈ ವಿಷಯವನ್ನು ದೃಢಪಡಿಸಿದ್ದಾರೆ.
ಕಟ್ಟುಕತೆ: ಕಾಂಗ್ರೆಸ್
‘ಇದೊಂದು ಕಟ್ಟುಕಥೆ’ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಲೇವಡಿ ಮಾಡಿದೆ. ಮೋದಿ ಅವರ ಜನಪ್ರಿಯತೆ ಕುಗ್ಗಿದಾಗಲೆಲ್ಲ ಅವರ ಹತ್ಯೆಯ ಸಂಚಿನ ಕಥೆಯನ್ನು ಹರಿಬಿಡಲಾಗುತ್ತದೆ. ಇಂತಹ ಕಟ್ಟುಕಥೆಗಳನ್ನು ಹೆಣೆಯುವುದು ಮೋದಿ ಅವರ ಹಳೆಯ ತಂತ್ರ ಎಂದು ಪ್ರತಿಕ್ರಿಯಿಸಿದೆ.