ಅಥಣಿ: ‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬತ್ತಿರುವ ಕೃಷ್ಣಾ ನದಿ ತೀರದ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಇಲ್ಲಿನ ಜನರ ಬವಣೆಗಳನ್ನು ಅರಿಯಬೇಕು. ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡ, ನಿವೃತ್ತ ಡಿಡಿಪಿಐ ಬಿ.ಆರ್. ಗಂಗಪ್ಪನ್ನವರ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ವಾಸ್ತವ್ಯ ಮಾಡಿದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 800 ಗ್ರಾಮಗಳಲ್ಲಿನ ಜಲಕ್ಷಾಮದ ವಾಸ್ತವ ಅರಿವಾಗುತ್ತದೆ. ಶಾಸಕರು, ವಿಧಾನಸಪರಿಷತ್ ಸದಸ್ಯರು ಹಾಗೂ ಸಂಸದರನ್ನೂ ಕರೆದುಕೊಂಡು ತಂಗಬೇಕು’ ಎಂದು ಕೋರಿದರು.
‘ಅಧಿಕಾರಿಗಳಿಗೆ ಇಲ್ಲಿ ಗಂಭೀರ ಪರಿಸ್ಥಿತಿಯ ಅರಿವಿಲ್ಲ. ಹೀಗಾಗಿ ಅವರು ಸರ್ಕಾರಕ್ಕೆ ಸರಿಯಾದ ವರದಿ ಕೊಡುತ್ತಿಲ್ಲ. ಪರಿಣಾಮ, ಜನರ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ. ಮುಖ್ಯಮಂತ್ರಿಯೇ ಬಂದು ಜನಪ್ರತಿನಿಧಿಗಳೊಂದಿಗೆ ಚರ್ಚಿಸಬೇಕು. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಾಗಿ ಮಹಾರಾಷ್ಟ್ರ ಸರ್ಕಾರದ ಮೊರೆ ಹೋಗುವುದನ್ನು ತಪ್ಪಿಸಲು ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಮನವಿ ಮಾಡಿದರು.