ಬೆಳಗಾವಿ: ‘ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೇಘಾ ಮೋಹಿತೆ ಕನ್ನಡ ಭಾಷೆಗೆ ಅವಮಾನ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಚಿಂಚಣಿ ಮಠದ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಕನ್ನಡ ಸಂಘಟನೆಗಳವರು ಅಲ್ಲಿನ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
‘ಬೇಡಕಿಹಾಳದಲ್ಲಿ ಈಚೆಗೆ ಕೋವಿಡ್ ಲಸಿಕಾರಣ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಮೇಘಾ ಮರಾಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸದಲಗಾ ಠಾಣೆ ಪಿಎಸ್ಐ ‘ನನಗೆ ಮರಾಠಿ ಗೊತ್ತಾಗುವುದಿಲ್ಲ. ದಯವಿಟ್ಟು ಕನ್ನಡದಲ್ಲಿ ಹೇಳಿ’ ಎಂದು ಕೋರಿದ್ದರು. ಇದರಿಂದ ಸಿಟ್ಟಾದ ಅಧ್ಯಕ್ಷೆ ಪಿಎಸ್ಐ ಜೊತೆ ವಾಗ್ವಾದ ನಡೆಸಿದ್ದಾರೆ. ಬಳಿಕ ಪಂಚಾಯ್ತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ.
‘ಅಧ್ಯಕ್ಷರು ಬಹಿರಂಗ ಕ್ಷಮೆ ಯಾಚಿಸಬೇಕು. ಪಿಎಸ್ಐ ವಿರುದ್ಧ ಸುದ್ದಿಗೋಷ್ಠಿ ನಡೆಸಲು ಪಂಚಾಯ್ತಿ ಕಾರ್ಯಾಲಯ ನೀಡಿದ ಪಿಡಿಒ ಅಮಾನತುಗೊಳಿಸಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.
ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಮಿಥುನ ಅಂಕಲಿ, ‘ನಾಡು, ನುಡಿಗೆ ಅವಮಾನ ಆಗುವಂತಹ ಘಟನೆಗಳನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ನಾಡಿನ ಚುನಾಯಿತ ಪ್ರತಿನಿಧಿಗಳು ಕನ್ನಡದಲ್ಲಿ ಮಾತನಾಡುವುದಿಲ್ಲ ಎನ್ನುವಂತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ.ಎಸ್.ಆರ್. ಪಾಟೀಲ, ಕೋಶಾಧ್ಯಕ್ಷ ಶಿವಾನಂದ ಪುರಾಣಿಕಮಠ, ಗಡಿನಾಡು ಕನ್ನಡ ಬಳಗದ ಗೌರವಾಧ್ಯಕ್ಷ ಮಾರುತಿ ಕುನ್ನೂರಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕಪಿಲ ಕಮತೆ ಇದ್ದರು.