ಗೋಕಾಕ: ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಮತ್ತು ನಿತ್ಯವೂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯವರು ಇಲ್ಲಿನ ತಾ.ಪಂ. ಕಾರ್ಯಾಲಯದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಅವರಿಗೆ ಮನವಿ ಸಲ್ಲಿಸಿದರು.
‘ಯೋಜನೆ ಕುರಿತು ಮಾಹಿತಿ ಕೇಳಿದರೆ ಗ್ರಾಮ ಪಂಚಾಯಿತಿಯವರು ನೀಡುತ್ತಿಲ್ಲ. ಯಾವುದೇ ಅರ್ಜಿಗಳಿಗೆ ಸ್ವೀಕೃತಿ ಕೊಡುವುದಿಲ್ಲ. ಕೂಲಿ ಕಾರ್ಮಿಕರು ಕೆಲಸ ಕೇಳಿದರೆ ಅರಣ್ಯ ಇಲಾಖೆಯವರನ್ನು ಕೇಳಿ ಎಂಬ ಹಾರಿಕೆಯ ಉತ್ತರ ನೀಡಿ ಸಾಗ ಹಾಕುತ್ತಾರೆ’ ಎಂದು ದೂರಿದರು.
‘ಕೊರೊನಾ ಬಿಕ್ಕಟ್ಟಿನಿಂದ ಸಿಲುಕಿ ಬಸವಳಿದಿರುವ ನಮಗೆ ನಿರಂತರವಾಗಿ ಕೆಲಸ ನೀಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಆಲಿಕೆ ಸಭೆ ನಡೆಸಬೇಕು’ ಎಂದು ಒತ್ತಾಯಿಸಿದರು.