ಬೆಳಗಾವಿ: ‘ಇಲ್ಲಿನ ನಗರಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಸ್ಥಾಪಿಸಿರುವ ಕನ್ನಡ ಧ್ವಜವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು’ ಎಂದು ಆಗ್ರಹಿಸಿ ‘ಕರುನಾಡ ಸೇವಕರು’ ಸಂಘಟನೆ ಅಧ್ಯಕ್ಷ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
‘ತೆರವುಗೊಳಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರು ಒತ್ತಡ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಒತ್ತಡಕ್ಕೆ ಅಧಿಕಾರಿಗಳು ಮಣಿಯಬಾರದು. ಕನ್ನಡ ನೆಲದಲ್ಲಿ ಹಾರಿಸಿರುವ ಧ್ವಜಕ್ಕೆ ರಕ್ಷಣೆ ನೀಡಬೇಕು. ಕನ್ನಡಿಗರ ಭಾವನೆಗಳಿಗೆ ಬೆಲೆ ಕೊಡಬೇಕು’ ಎಂದು ಒತ್ತಾಯಿಸಿದರು.
ಬಳಿಕ ಕನ್ನಡ ಧ್ವಜ ಹಾರಿಸಿದ ಹೋರಾಟಗಾರ ಶ್ರೀನಿವಾಸ ತಾಳೂಕರ ಮೊದಲಾದವರನ್ನು ಅವರು ಪಾಲಿಕೆ ಎದುರು ಸತ್ಕರಿಸಿದರು.