ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ರೈತ ಮುಖಂಡರ ಅಹವಾಲು ಆಲಿಸಿದರು.
‘ಸಾವರಿನ್ ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಬಿಲ್ ಕೊಡಿಸಬೇಕು. ಸಕ್ಕರೆ ಆಯುಕ್ತರ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು. ನೆರೆಯಿಂದ ಮನೆ ಮತ್ತು ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ಕಲ್ಪಿಸಬೇಕು’’ ಎಂದು ಮುಖಂಡ ಚೂನಪ್ಪ ಪೂಜಾರಿ ಮೊದಲಾದವರು ಒತ್ತಾಯಿಸಿದರು.
ಸಹನೆಯಿಂದ ಅಹವಾಲು ಆಲಿಸಿದ ಬೊಮ್ಮಾಯಿ, ಸೂಕ್ತ ಕ್ರಮದ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಅಥಣಿ ತಾಲ್ಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಮನವಿ ಸಲ್ಲಿಸಿದರು. ‘ಆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ದೂರಿದರು. ‘ಆಡಳಿತ ಮಂಡಳಿ ನಡೆಸಿದ ಭ್ರಷ್ಟಾಚಾರದ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ಸತ್ಯ ಬಯಲಿಗೆ ತರಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ರವಿ ಸಿದ್ದಮ್ಮನವರ, ಮಹಾಂತೇಶ ಹಿರೇಮಠ, ಈಶ್ವರ ಶಿಲ್ಲೇದಾರ, ಗಂಗಾಧರ ಮೇಟಿ, ರಾಜು ಪವಾರ, ಎನ್. ಗೂಲಪ್ಪನವರ, ಶಿವು ಜಗದೇವ ಇದ್ದರು.