ಬೆಳಗಾವಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರದಿಂದ ಎರಡು ದಿನಗಳ ಕಾಲ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದ ಮೂಲಕ ಬಂದಿಳಿಯಲಿದ್ದಾರೆ. ನಂತರ ಅವರು ಬೆಳಗಾವಿ ಜಿಲ್ಲೆಯ ಗೋಕಾಕ, ಅರಭಾವಿ ಹಾಗೂ ಘಟಪ್ರಭಾದಲ್ಲಿ ಸಂಚರಿಸಲಿದ್ದಾರೆ.
ಮಧ್ಯಾಹ್ನ ಘಟಪ್ರಭಾದಲ್ಲಿರುವ ಸೇವಾದಳ ತರಬೇತಿ ಶಿಬಿರಕ್ಕೆ ಭೇಟಿ ನೀಡುವರು.
ಸಭೆ: ಬೆಳಗಾವಿ ಗ್ರಾಮಾಂತರ ಜಿಲ್ಲೆ, ನಗರ ಘಟಕ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಕಾರ್ಯಕಾರಿ ಸಮಿತಿ ಸಭೆಯನ್ನು ಘಟಪ್ರಭಾದಲ್ಲಿ ಸಂಜೆ 4ಕ್ಕೆ ನಡೆಸಲಿದ್ದಾರೆ.
ಮಂಗಳವಾರ ಬಾಗಲಕೋಟೆ ಜಿಲ್ಲೆಯತ್ತ ಪ್ರಯಾಣ ಬೆಳೆಸುವರು. ಜಮಖಂಡಿ, ಮುಧೋಳ ಹಾಗೂ ಬಾದಾಮಿಯಲ್ಲಿನ ಪ್ರವಾಹ ಸ್ಥಿತಿಯನ್ನು ವೀಕ್ಷಿಸುವರು. ನಂತರ ಮುಖಂಡರ ಸಭೆ ನಡೆಸುವರು. ಬುಧವಾರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.