ಬೆಳಗಾವಿ: ‘ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಸರ್ವಶ್ರೇಷ್ಠವಾದವು. ಅವುಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕು’ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಸಲಹೆ ನೀಡಿದರು.
ಇಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ನಡೆದ ಉಚಿತ ಮೋತಿ ಬಿಂದು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
‘ವಯಸ್ಸಾದ ನಂತರ ಶರೀರದಲ್ಲಾಗುವ ಕೆಲವು ಬದಲಾವಣೆಗಳಿಂದ ಮೋತಿಬಿಂದು ಹಾಗೂ ಇನ್ನಿತರ ಸಮಸ್ಯೆಗಳಿಗೆ ಒಳಗಾಗುತ್ತವೆ. ಹೀಗಾಗಿ, ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ದೃಷ್ಟಿ ಹೊಂದಬಹುದಾಗಿದೆ’ ಎಂದು ತಿಳಿಸಿದರು.
ಉಚಗಾಂವದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ 45 ಮಂದಿಯನ್ನು ತಪಾಸಣೆ ಮಾಡಲಾಯಿತು. 6 ಮಂದಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆ ಮಾಡಲಾಯಿತು.
ನೇತ್ರ ವಿಭಾಗದ ಮುಖ್ಯಸ್ಥ ಡಾ.ಪದ್ಮಜಾ ಹಂಜಿ ಮತ್ತು ಅಡಿವೆಪ್ಪ ಪರಾಯಿ ಶಿಬಿರ ನಡೆಸಿಕೊಟ್ಟರು.