ಅಥಣಿ: ‘ತಾಲ್ಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಬಾಕಿ ಉಳಿಸಿಕೊಂಡಿರುವ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ದರೂರ ಗ್ರಾಮದಿಂದ ಕಾರ್ಖಾನೆಯವರೆಗೂ ಅಂದರೆ ಸುಮಾರು 6 ಕಿ.ಮೀ.ವರೆಗೆ ಪಾದಯಾತ್ರೆ ನಡೆಸಿದರು. ನೂರಾರು ರೈತರು ಪಾಲ್ಗೊಂಡಿದ್ದರು.
‘ಕಬ್ಬು ಪೂರೈಸಿದವರಿಗೆ 2018 ಹಾಗೂ 2019ರಲ್ಲಿ ಎಫ್ಆರ್ಪಿ ಪ್ರಕಾರ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡ ಶಶಿಕಾಂತ ಪಡಸಲಗಿ ನೇತೃತ್ವದಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಹಣ ಪಡೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾರು ಹಣ ಕೊಟ್ಟಿದ್ದಾರ ಎನ್ನುವುದನ್ನು ಕಾರ್ಖಾನೆಯವರು ಸಾಬೀತುಪಡಿಸಬೇಕು’ ಎಂದು ಪಡಸಲಗಿ ಸವಾಲು ಹಾಕಿದರು.
‘ಇದು ರೈತರ ಕಾರ್ಖಾನೆ. ಎಲ್ಲವನ್ನೂ ಪ್ರಶ್ನಿಸುವ ಹಕ್ಕು ರೈತರಾದ ನಮಗಿದೆ. ಇನ್ನದರೂ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯಯುತ ಬಿಲ್ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಪ್ರಕಾಶ ಪೂಜಾರಿ ಮತ್ತು ಚೂನಪ್ಪ ಪೂಜಾರಿ ಮಾತನಾಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಅಥಣಿಯಲ್ಲೆ ಸಭೆ ನಡೆಸಿ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.