ಬೆಳಗಾವಿ: ಬಹುದಿನಗಳ ಬೇಡಿಕೆಯಾಗಿದ್ದ ವಾಸ್ಕೊ– ಬೆಳಗಾವಿ ಹೊಸ ರೈಲಿಗೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಗೋವಾದ ವಾಸ್ಕೊ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿದರು.
‘ಈ ರೈಲಿನಿಂದ ಬೆಳಗಾವಿ ಹಾಗೂ ಗೋವಾ ನಡುವಿನ ವ್ಯಾಪಾರ ವಹಿವಾಟಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಪ್ರವಾಸೋದ್ಯಮಕ್ಕೂ ಚೇತರಿಕೆ ದೊರೆಯಲಿದೆ. ಮಾರ್ಗ ಮಧ್ಯೆ ಪ್ರಸಿದ್ಧ ದೂಧ್ಸಾಗರ್ ಜಲಪಾತದ ಬಳಿಯೂ ರೈಲಿಗೆ ನಿಲುಗಡೆ ನೀಡಲಾಗಿದೆ’ ಎಂದು ಹೇಳಿದರು.
‘ತಾಜಾ ತರಕಾರಿಗಳು, ಹಾಲು, ಹಾಗೂ ಹಣ್ಣುಗಳ ಸಾಗಾಟಕ್ಕೆ ಅನುಕೂಲವಾಗಲಿದೆ. ಎರಡೂ ರಾಜ್ಯಗಳ ನಡುವೆ ವ್ಯಾಪಾರ ವಹಿವಾಟು ಹೆಚ್ಚಳವಾಗುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ’ ಎಂದರು.
‘ವಾರದಲ್ಲಿ ಎರಡು ದಿನ ಶುಕ್ರವಾರ ಹಾಗೂ ಶನಿವಾರ ಇದು ಸಂಚರಿಸಲಿದೆ. ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು, ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.