ಬೆಳಗಾವಿ: ‘ಜಿಲ್ಲೆಯಲ್ಲಿ ಜುಲೈ 15ರವರೆಗೂ ಪ್ರವಾಹದ ಭೀತಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಧ್ಯಕ್ಕೆ ಪ್ರವಾಹದ ಆತಂಕವಿಲ್ಲ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ. ಅದರಲ್ಲೂ ಕೊಯ್ನಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ತಗ್ಗಿದೆ. ವೇದಗಂಗಾ, ಧೂಧ್ಗಂಗಾ ನದಿಯಲ್ಲೂ ನೀರಿನ ಪ್ರಮಾಣ ಇಳಿದಿದೆ’ ಎಂದು ತಿಳಿಸಿದರು.
‘ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯೆ ಕುಡಿಯುವ ನೀರಿಗಾಗಿ ಪರಸ್ಪರ ಒಪ್ಪಂದವಾಗಿದೆ. ನಮ್ಮ ಬೆಳಗಾವಿಗೆ ಕುಡಿಯುವ ಉದ್ದೇಶಕ್ಕಾಗಿ ಬೇಸಿಗೆಯಲ್ಲಿ 4 ಟಿಎಂಸಿ ನೀರು ಕೊಡಬೇಕು. ಅಂತೆಯೇ ನಾವೂ ಮಹಾರಾಷ್ಟ್ರದ ಜತ್ತ ತಾಲ್ಲೂಕಿಗೆ 4 ಟಿಎಂಸಿ ನೀರನ್ನು ನೀಡಬೇಕಿದೆ. ಈ ಒಪ್ಪಂದವನ್ನು ಕಾರ್ಯರೂಪಕ್ಕೆ ತರಬೇಕಿದೆ. ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮುನ್ನ ಕರ್ನಾಟಕಕ್ಕೆ ಹೇಳಬೇಕು. ಇಲ್ಲವಾದರೆ ಇಲ್ಲಿ ಪ್ರವಾಹ ಉಂಟಾಗುತ್ತದೆ; ಹಾನಿ ಆಗುತ್ತದೆ ಎನ್ನುವುದನ್ನು ಹೇಳಿದ್ದೇವೆ’ ಎಂದರು.