ಬೆಳಿಗ್ಗೆಯಿಂದಲೂ ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಜಿಟಿ ಜಿಟಿ ಮಳೆ ಇತ್ತು. ಆದರೆ, ಅದು ಭಕ್ತರ ಉತ್ಸಾಹಕ್ಕೆ ತೊಂದರೆ ಉಂಟು ಮಾಡಲಿಲ್ಲ. ಮಾರುಕಟ್ಟೆಗಳಿಂದ ತಂದ ಗಣೇಶ ಮೂರ್ತಿಗಳನ್ನು ಪ್ರಮುಖ ವೃತ್ತ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. ಕೆಲವರು ವಾದ್ಯಮೇಳಗಳೊಂದಿಗೆ ಸ್ವಾಗತಿಸಿದರು. ಕೆಲವರು ಕಾರು, ದ್ವಿಚಕ್ರವಾಹನ, ಜೀಪ್, ಟ್ರ್ಯಾಕ್ಟರ್ ಮೊದಲಾದವುಗಳಲ್ಲಿ ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಮಹಾಮಂಡಳವರು ಹಾಗೂ ಕುಟುಂಬದವರು ಗಣಪನನ್ನು ಬರಮಾಡಿಕೊಂಡರು.