ಗುಳೇದಗುಡ್ಡ: ತಾಲ್ಲೂಕಿನ ಪರ್ವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಸತಿ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಿರುವ ಆಶ್ರಯ ಫಲಾನುಭವಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಮಂಗಳವಾರ ತಾಲ್ಲೂಕು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಾದಿಬಸವೇಶ್ವರ ಗುಡಿಯಿಂದ ತಹಶೀಲ್ದಾರ್ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಡಿ. ಬಾಬು, ಶಿವಲಿಲಾ ಪ್ರಕಾಶ ಬಾಗಲಕೋಟೆ, ನಿಂಗಪ್ಪ ಗಾಜಿ ಹಾಗೂ ಕಾರ್ಯಕರ್ತರು ಮಾತನಾಡಿದರು.
‘ಪರ್ವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಜಮೀನಿನಲ್ಲಿ ಸುಮಾರು 40 ಕುಟುಂಬಗಳ ವಸತಿ ಯೋಜನೆಡಿಯಲ್ಲಿ ಆಶ್ರಯ ನಿವೇಶನ ಕಟ್ಟಿಕೊಳ್ಳಲು 2012ರಲ್ಲಿ ಜಮೀನಿನ ಮಾಲೀಕರು ದಾನ ಪತ್ರ ಬರೆದು ಕೊಟ್ಟಿದ್ದಾರೆ. ಅದರಂತೆ ಗ್ರಾಮ ಪಂಚಾಯ್ತಿಯಲ್ಲಿ ನಮ್ಮೆಲ್ಲರ ಹೆಸರು ದಾಖಲಾಗಿದೆ. 2016ರಲ್ಲಿ ಠರಾವು ಪಾಸ್ ಮಾಡಿ ಉತಾರ ನೀಡಿದ್ದಾರೆ. ಮೂಲ ಸೌಲಭ್ಯ ನೀಡಬೇಕೆಂದು ಮನವಿ ಮಾಡಿಕೊಂಡರೆ ನೀವು ಪಡೆದ ಜಾಗದ ಮಾಲೀಕರು ತಕರಾರು ಅರ್ಜಿ ಕೊಟ್ಟಿದ್ದಾರೆ. ಹೀಗಾಗಿ ನಿಮಗೆ ಮೂಲ ಸೌಲಭ್ಯ ನೀಡಲು ಬರುವುದಿಲ್ಲ ಎಂದು ನಮಗೆ ಪಂಚಾಯ್ತಿ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವಾರದ ಒಳಗೆ ಸೌಲಭ್ಯ ಕಲ್ಪಿಸದೇ ಹೋದರೆ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಫಲಾನುಭವಿಗಳು ಮತ್ತು ಹೋರಾಟಗಾರರು ಎಚ್ಚರಿಕೆ ನೀಡಿದರು. ತಾಲ್ಲೂಕು ತಹಶೀಲ್ದಾರ್ಗೆ ಬರೆದ ಮನವಿ ಪತ್ರವನ್ನು ಉಪತಹಶೀಲ್ದಾರ್ ಮಹಾಂತೇಶ ಅಂಗಡಿ ಅವರಿಗೆ ಸಲ್ಲಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಚನ್ನವೀರ ಹಾದಿಮನಿ, ಸುನಿತಾ ಮರಡಿಮಠ, ಭರಮಪ್ಪ ಆರ್. ಗಂಗಾವತಿ, ಶರಣಪ್ಪ ಯ. ಆಸಂಗಿ, ರಂಗಪ್ಪ ಗೌಡರ, ಹನಮಪ್ಪ, ಸಂಗಪ್ಪ, ತಿಪ್ಪಣ್ಣ ಗಾಜಿ, ಸುನಂದಾ ಆರ್. ಮಾಲಗಿತ್ತಿ, ಸರೋಜಾ ಚಂದಾಪುರ ಸೇರಿದಂತೆ ಆಶ್ರಯ ಫಲಾನುಭವಿಗಳು ಪಾಲ್ಗೊಂಡಿದ್ದರು.