ಬೆಳಗಾವಿ:ಮುಂಡರಗಿ ತೋಟದಾರ್ಯ ಶಾಖಾಮಠದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಬಸವಾಭಿಮಾನಿಗಳ ಒಕ್ಕೂಟದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ನಿಜಗುಣಾನಂದ ಸ್ವಾಮೀಜಿ ಅವರು ದೇಶ–ವಿದೇಶಗಳಲ್ಲಿ ಬಸವಾದಿ ಶರಣರ ವಚನ ಚಳವಳಿಯ ಕುರಿತು ತಿಳಿಸಿ, ವೈಚಾರಿಕ ಕ್ರಾಂತಿ ಮಾಡುತ್ತಿದ್ದಾರೆ. ಸಮಾಜದಲ್ಲಿನ ಮೌಢ್ಯತೆ, ಕಂದಾಚಾರಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಶರಣರ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾತಿ ತಾರತಮ್ಯ ಕಿತ್ತು ಹಾಕಲು ಶ್ರಮಿಸುತ್ತಿದ್ದಾರೆ. ಅವರಿಗೆ ದಾವಣಗೆರೆಯಿಂದ ಮೂರು ಬಾರಿ ಬೆದರಿಕೆ ಪತ್ರಗಳು ಬಂದಿವೆ. ಹೀಗಾಗಿ, ಅವರಿಗೆ ಭದ್ರತೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
‘ದಾವಣಗೆರೆಯಿಂದ ಬಂದಿರುವ ಬೆದರಿಕೆ ಪತ್ರದ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು. ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಮಾತನಾಡಿ, ‘ಈಗಾಗಲೇ ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮತಾಂಧರು ಬಲಿ ಪಡೆದಿದ್ದಾರೆ. ಈಗ ನಿಜಗುಣಾನಂದ ಶ್ರೀಗಳಿಗೆ ಪದೇ ಪದೇ ಜೀವ ಬೆದರಿಕೆಯ ಕರೆಗಳು ಹಾಗೂ ಅನಾಮಧೇಯ ಪತ್ರಗಳು ಬರುತ್ತಿರುವುದು ಆತಂಕ ಮೂಡಿಸಿದೆ. ಈ ಆತಂಕ ನಿವಾರಣೆಗೆ ಪೊಲೀಸರು ಹಾಗೂ ಸಂಬಂಧಿಸಿದವರು ಕ್ರಮ ವಹಿಸಬೇಕು’ ಎಂದು ಕೋರಿದರು.
ಮುಖಂಡರಾದ ಆನಂದ ಗುಡಸ, ಕೆ. ಶರ್ಮಾ, ಬಸವರಾಜ ರೊಟ್ಟಿ, ಅಶೋಕ ಬೆಂಡಗೇರಿ, ಕೆ. ಬಸವರಾಜು, ವಿ.ಕೆ. ಪಾಟೀಲ ಭಾಗವಹಿಸಿದ್ದರು.