ಬೆಳಗಾವಿ: ಗೋಕಾಕ ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮವನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸುವರ್ಣ ವಿಧಾನಸೌಧ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಅಂಕಲಗಿ ಹಾಗೂ ಅಕ್ಕತಂಗೇರಹಾಳ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಿದ್ದಾರೆ. ಈ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ’ ಎಂದು ಆರೋಪಿಸಿದರು.
‘ನಾವು ಕೃಷಿಯನ್ನೇ ಅವಲಂಬಿಸಿ, ಬದುಕು ಸಾಗಿಸುತ್ತಿದ್ದೇವೆ. ನಮ್ಮೂರು ಪಟ್ಟಣ ಆಗುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಲಿದೆ. ನಮ್ಮ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಮತ್ತಿತರ ಶೈಕ್ಷಣಿಕ ಸೌಲಭ್ಯಗಳು ಕೈತಪ್ಪಲಿವೆ. ಈ ಹಿಂದಿನಂತೆ ಅಂಕಲಗಿ ಗ್ರಾಮ ಪಂಚಾಯ್ತಿಯಲ್ಲೇ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಬಸನಗೌಡ ಹೊಳಿಯಾಚಿ, ನಾಸೀರ್ ದೇಸಾಯಿ, ರಾಜುಗೌಡ ನಿರ್ವಾಣಿ, ಶಂಕರ ಬೆಣ್ಣಿ ಇದ್ದರು.