ಐಗಳಿ (ಬೆಳಗಾವಿ): ‘ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಮಾದರಿ ಶಾಲೆಯನ್ನು ಐಗಳಿ ಗ್ರಾಮ ಪಂಚಾಯ್ತಿಯಿಂದ ದತ್ತು ಪಡೆದುಕೊಳ್ಳಲಾಗಿದ್ದು, ಇದರ ಅಭಿವೃದ್ದಿ ನಮ್ಮ ಗುರಿಯಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಬಿರಾದಾರ ಹೇಳಿದರು.
ಇಲ್ಲಿನ ಸರ್ಕಾರಿ ಕನ್ನಡ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸರ್ಕಾರಿ ಶಾಲೆ ಬಗ್ಗೆ ಮೂಗು ಮುರಿಯುವವರಿಗೆ ಮನವರಿಕೆ ಮಾಡಿಕೊಟ್ಟು ಜಾಗೃತಿ ಮೂಡಿಸುತ್ತಿದ್ದೇವೆ. ಇದರಿಂದ ದಾಖಲಾತಿ ಹೆಚ್ಚಾಗಿದೆ. ಮಾದರಿ ಶಾಲೆಯನ್ನಾಗಿ ಮಾಡುತ್ತೇವೆ. ಒಳ್ಳೆಯ ಶಿಕ್ಷಕರಿದ್ದಾರೆ. ಮಾತೃಭಾಷೆ ಕನ್ನಡ ಕಲಿಸಲು ಟೊಂಕು ಕಟ್ಟಿ ನಿಂತಿದ್ದಾರೆ’ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿನಿ, ಉಪನ್ಯಾಸಕಿ ಭಾಗೀರಥಿ ರುದ್ರಗೌಡ ಪಾಟೀಲ, ‘ನಾವು ಕಲಿಯುವಾಗ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶಾಲೆ ಇತ್ತು. ಈಗ, ಬಾಲಕಿಯರ ಶಾಲಾ ಕೊಠಡಿ ಖಾಲಿ ಇದೆ. ಇಲ್ಲಿ ಬಾಲಕಿಯರ ಪ್ರೌಢಶಾಲೆ ಪ್ರಾರಂಭವಾಗಬೇಕು’ ಎಂದು ಹೇಳಿದರು.
ರಾಚೋಟೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ರಾಜಶ್ರೀ ಶಂ.ಪಾಟೀಲ ಉದ್ಘಾಟಿಸಿದರು.