ಬೆಳಗಾವಿ: ‘ಅಂಕಗಳ ಗಳಿಕೆ ಉದ್ಯೋಗ ಪಡೆಯಲು ಅಗತ್ಯವಾದರೆ ಸಾಹಿತ್ಯ, ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಅತ್ಯವಶ್ಯವಾಗಿವೆ’ ಎಂದು ರಾಣಿ ಪಾರ್ವತಿದೇವಿ ಕಾಲೇಜಿನ ಪ್ರಾಚಾರ್ಯೆ ಡಾ.ಅಚಲಾ ದೇಸಾಯಿ ಹೇಳಿದರು.
ಇಲ್ಲಿಯ ದ.ಮ.ಶಿ. ಮಂಡಳದ ಭಾವುರಾವ ಕಾಕತಕರ ಕಾಲೇಜಿನ ‘ಝೇಂಕಾರ’ ಭಿತ್ತಿಪತ್ರಿಕೆಯನ್ನು ಬುಧವಾರ ಬಿಡುಗಡೆ ಮಾಡಿ, ಸಾಂಸ್ಕೃತಿಕ ಮತ್ತು ವಿವಿಧ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಓದುವುದು ಬಹು ಮುಖ್ಯ. ಓದುವುದರಿಂದ ಹಾಗೂ ಕಲೆ, ಸಾಹಿತ್ಯ ಮತ್ತು ರಂಗಕಲೆಗಳಲ್ಲಿ ಆಸಕ್ತಿ ಹೊಂದಿ ತೊಡಗಿಸಿಕೊಳ್ಳುವುದರಿಂದ ಕೆಲಸದ ಒತ್ತಡಗಳನ್ನು ಸಹಜವಾಗಿ ಕಡಿಮೆ ಮಾಡಿಕೊಂಡು ಹಗುರಾಗಬಹುದು. ಅದು ಆರೋಗ್ಯಕ್ಕೆ ಒಳ್ಳೆಯದು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ, ‘ನಮ್ಮ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲೆ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.
ಡಾ.ಮೀನಾ ಮೋಹಿತೆ, ಡಾ.ಡಿ.ಟಿ. ಪಾಟೀಲ ಇದ್ದರು.
ರಿಹಾನ್ ಮುಲ್ಲಾ, ಖುಷಿ ಕಣಬರಕರ, ಅಪೂರ್ವ ಸೂರ್ಯವಂಶಿ ಸ್ವಾಗತಗೀತೆ ಹಾಡಿದರು. ವೀಣಾ ಪಾಟೀಲ ಪರಿಚಯಿಸಿದರು. ಕ್ರೀಡಾ ವಿಭಾಗದ ಅಧ್ಯಕ್ಷೆ ಡಾ.ಮೀನಾ ಮೋಹಿತೆ ಸ್ವಾಗತಿಸಿದರು. ಸತೀಶ ಚವಾಣ ವಂದಿಸಿದರು. ಶ್ರೀನಿಧಿ ಅಪ್ಪುಗೋಳ ಮತ್ತು ರಮೇಝಾ ಮುಲ್ಲಾ ನಿರೂಪಿಸಿದರು.