ಬೆಳಗಾವಿ: ‘ಹಾಲುಮತದ ಸಮುದಾದಯ ಶ್ರೀಗಳಿಗೆ ಅಗೌರವ ತೋರಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಹಾಲುಮತ ಮಹಾಸಭಾದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ ಹೆಗಡೆ ಪ್ರತಿಭಟನಾ ನೇತೃತ್ವ ವಹಿಸಿದ್ದರು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ಪಟ್ಟಣದಲ್ಲಿ ಕನಕದಾಸ ವೃತ್ತಕ್ಕೆ ಹೆಸರಿಡುವ ಗೊಂದಲ ನಿವಾರಣಾ ಸಭೆಯಲ್ಲಿ ಸಚಿವರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಜನರಅಭಿಪ್ರಾಯಗಳನ್ನುಆಲಿಸಬೇಕಾದ ಸಚಿವರು ಶ್ರೀಗಳಿಗೆ ಅಗೌರವ ತೋರಿದ್ದಾರೆ. ಹೀಗಾಗಿ, ಅವರು ಸ್ವಾಮೀಜಿ ಅವರ ಕ್ಷಮೆ ಯಾಚಿಸಬೇಕು. ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
‘ಸಚಿವರು ಎಲ್ಲ ಸಮಾಜದ ಜನರ ಮತಗಳಿಂದ ನಾಯಕರಾಗಿರುವುದನ್ನು ಮರೆತಂತಿದೆ. ರಾಜೀನಾಮೆ ಕೊಡದಿದ್ದರೆ ರಾಜ್ಯದಾದ್ಯಂತ ಮಹಾಸಭಾದಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕಾಗವಾಡ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಚೋರಮೂಲೆ, ವಿನಾಯಕ ಕಟ್ಟಿಕರ, ಲಕ್ಷ್ಮಣ ಲವಟೆ, ಮಂಜುನಾಥ ಭನ್ನೆ, ಕೃಷ್ಣ ಕುರುಬರ, ಬಸಪ್ಪ ದಳವಾಯಿ, ಪುಂಡಲೀಕ ಇಟ್ನಾಳ ಇದ್ದರು.