ಅಥಣಿ: ‘ಮುಖಂಡರು ರಾಜಕಾರಣದೊಂದಿಗೆ ಸಮಾಜ ಸಂಘಟನೆಗೂ ಒತ್ತು ಕೊಡಬೇಕು. ಆಗ, ರಾಜಕೀಯ ಭವಿಷ್ಯದೊಂದಿಗೆ ಹಾಲುಮತಕ್ಕೂ ಒಳಿತಾಗುತ್ತದೆ’ ಎಂದು ಹಾಲುಮತ ಮಹಾಸಭಾ ಚಿಕ್ಕೊಡಿ ಜಿಲ್ಲಾ ಘಟಕದ ಅಧ್ಯಕ್ಷ ನಿಶಾಂತ ದಳವಾಯಿ ಹೇಳಿದರು.
ಸಂಗೊಳ್ಳಿರಾಯಣ್ಣ ಪುಣ್ಯಸ್ಮರಣೊತ್ಸವದ ನಿಮಿತ್ತ ಇಲ್ಲಿ ಸಮಾಜದಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಲವು ವರ್ಷಗಳಿಂದ ನಾವು ಸಮಾಜ ಸಂಘಟನೆ ಮಾಡುತ್ತಾ ಬಂದಿದ್ದೇವೆ. ಇನ್ನೂ ಸಕ್ರಿಯವಾಗಿ ಚಟುವಟಿಕೆಗಳು ನಡೆಯಬೇಕು. ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಂಘಟನೆಗೆ ತೊಡಕಾಗಿದೆ. ಮುಂದೆ ಕ್ರಿಯಾಶೀಲವಾಗಿ ತೊಡಗಬೇಕು’ ಎಂದರು.
ಕುರುಬರ ಸಂಘ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಸತ್ಯಪ್ಪ ಬಾಗೆನ್ನವರ್, ‘ಹಿಂದುಳಿದ ವರ್ಗದವರಾದ ನಾವು ಸಮಾಜವನ್ನು ಸಂಘಟಿಸಿ ಹಕ್ಕು ಪಡೆದುಕೊಳ್ಳಬೇಕಾಗಿದೆ. ರಾಜಕೀಯ ಪ್ರಾತನಿಧ್ಯ ಸಿಗುವಂತೆಯೂ ಮಾಡಬೇಕಿದೆ. ಜನರಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಅವಕಾಶಗಳನ್ನು ಕಲ್ಪಿಸಬೇಕು’ ಎಂದು ನುಡಿದರು.
‘ಬರುವ ಚುನಾವಣೆಗಳಲ್ಲಿ ಸಮಾಜದವರಿಗೆ ಹೆಚ್ಚಿನ ಟಿಕೆಟ್ಗೆ ಬೇಡಿಕೆ ಇಡಬೇಕು‘ ಎಂದು ಕರೆ ನೀಡಿದರು.