ಬೆಳಗಾವಿ: ‘ಸಮಾಜದವರ ಸಹಕಾರದಿಂದ ದೇವರ ದಾಸಿಮಯ್ಯ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ’ ಎಂದು ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಶಿವಪುತ್ರ ಬೋಜಣ್ಣವರ ತಿಳಿಸಿದರು.
ಇಲ್ಲಿ ಈಚೆಗೆ ನಡೆದ ಸಮಾಜದ 4ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಶಿವಾಚಾರ, ನೇಕಾರ ಸಮಾಜದ ಸಂಘಟನೆ ಹಾಗೂ ಉನ್ನತಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಫೆಬ್ರುವರಿಯಲ್ಲಿ 6ನೇ ಸಮಾವೇಶ ನಡೆಸಿ, ವಧು–ವರರ ಮಾಹಿತಿ ಪುಸ್ತಕ ‘ಸಂಕಲನ’ವನ್ನು ಎಲ್ಲರಿಗೂ ಹಂಚಿದ್ದೇವೆ’ ಎಂದರು.
ಕಾರ್ಯದರ್ಶಿ ಎಂ.ಆರ್. ಪಾಟೀಲ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿದರು. ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಭೂಮಿಕಾ ಮೋಹನ ಜಾಡಗೌಡ, ಶ್ರೇಯಸ್ ಪ್ರವೀಣ ಭೋಜಣ್ಣವರ, ಖುಷಿ ಟಿ. ಗೊನಬಾಳ, ಜಯೇಶ ಎಸ್. ಉರಮನಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀಕಾಂತ ಎಸ್. ಬಾಡಗಿ, ಹುಬ್ಬಳ್ಳಿಯ ರೈಲ್ವೆ ಸಮಿತಿ ಸದಸ್ಯರಾದ ಡಾ.ಮಹಾದೇವ ಎಸ್. ಇಟ್ನಾಳ, ಬಸವರಾಜ ಬಾಗೋಜಿ ಇದ್ದರು.