ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರ ಗೆಲುವಿಗಾಗಿ ಬಿಜೆಪಿ ಪರ ಪ್ರಚಾರ ನಡೆಸುವೆ ಎಂದಿರುವ ಪ್ರಕಾಶ ಹುಕ್ಕೇರಿ ಬದ್ಧತೆ ಕಾಂಗ್ರೆಸ್ಗೋ ಅಥವಾ ಬಿಜೆಪಿಗೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರು ಸೇರಿ ಯಾರೇ ಪಕ್ಷದ ಅಭ್ಯರ್ಥಿಯಾದರೂ ಗೆಲ್ಲಿಸುವುದು ಗೊತ್ತಿದೆ. ಹುಕ್ಕೇರಿ ಇಲ್ಲದಿದ್ದಾಗಲೂ ಸುರೇಶ ಅಂಗಡಿ ಅವರು 4 ಬಾರಿ ಆಯ್ಕೆಯಾಗಿದ್ದರು. ಪಕ್ಷಕ್ಕೆ ಅಷ್ಟು ತಾಕತ್ತಿದೆ’ ಎಂದರು.
‘ಪ್ರಕಾಶ ಹುಕ್ಕೇರಿ ಬಿಜೆಪಿ ಸೇರುವುದಾದರೆ ನಮ್ಮ ಹಿರಿಯ ನಾಯಕರು ನಿರ್ಣಯಿಸುತ್ತಾರೆ. ಯಾರೇ ಬಂದರೂ ಸ್ವಾಗತಿಸುತ್ತೇವೆ. ನಮ್ಮಲ್ಲಿಗೆ ಬಂದ ಮೇಲೆ ಮನೆಯ ಲಕ್ಷ್ಮಿಯಂತೆ ನಮ್ಮವರೇ ಆಗುತ್ತಾರೆ. ಸೊಸೆಯಂದಿರು ಹೆಚ್ಚಾದಷ್ಟೂ ಮನೆ ದೊಡ್ದದಾಗುತ್ತದೆ. ಅದಕ್ಕೆ ತಕ್ಕಂತೆ ಬೆಡ್ ರೂಂಗಳನ್ನು ಕಟ್ಟಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.