ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಕ್ಕೆ ನಿರಾಣಿ ನೀಡಿದ್ದನ್ನು ಮರಳಿಸುವೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Last Updated 2 ಫೆಬ್ರುವರಿ 2022, 13:13 IST
ಅಕ್ಷರ ಗಾತ್ರ

ಬೆಳಗಾವಿ: ‘ಸಚಿವ ಮುರುಗೇಶ ನಿರಾಣಿ ಅವರು ಮಠಕ್ಕೆ ದಾನವಾಗಿ ನೀಡಿರುವ ವಸ್ತುಗಳೆಲ್ಲವನ್ನೂ ಅವರ ಮನೆಗೆ ಮರಳಿಸುತ್ತೇನೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಮಾಜದ ರಾಜ್ಯ ಮಟ್ಟದ ಕಾರ್ಯಾಕಾರಿಣಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಸಚಿವರ ಹೆಸರಿನಲ್ಲಿ ಕೆಲವೊಂದು ಅನಾಮಧೇಯ ವ್ಯಕ್ತಿಗಳು ಶ್ರೀಪೀಠಕ್ಕೆ ನಿರಾಣಿ ಅವರು ನೀಡಿರುವ ದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇದರಿಂದ ನನಗೆ ಹಾಗೂ ಸಮಾಜಕ್ಕೆ ನೋವುಂಟಾಗಿದೆ. ಆದ್ದರಿಂದ ಸಮಾಜದ ಮುಖಂಡರ ಒಮ್ಮತದಂತೆ ವಾಪಸ್ ಕೊಡಲು ನಿರ್ಣಯಿಸಲಾಗಿದೆ’ ಎಂದು ಹೇಳಿದರು.

ನೋವಿನ ಮಾತುಗಳನ್ನು:

‘ರೊಟ್ಟಿ, ಬಟ್ಟೆ, ಕಸಬರಿಗೆ ಕೊಟ್ಟಿದ್ದೇವೆ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರಲ್ಲಿ ಹಾಕುತ್ತಿದ್ದಾರೆ. ಅದೆಲ್ಲವನ್ನೂ ಹಿಂತಿರುಗಿಸುತ್ತೇವೆ. ಏನೇನು ಕೊಟ್ಟಿದ್ದೇವೆ ಎನ್ನುವುದನ್ನು ನಿರಾಣಿ ಅವರೂ ಸ್ಪಷ್ಟವಾಗಿ ತಿಳಿಸಿಬಿಡಲಿ. ಪೀಠಕ್ಕೆ ಎಲ್ಲರೂ ದಾನ–ಧರ್ಮ ಕೊಟ್ಟಿದ್ದಾರೆ. ಆದರೆ, ಯಾರೂ ಕೊಟ್ಟಿರುವುದನ್ನು ಹೇಳಲ್ಲ. ಯಾರೇ ಕೊಟ್ಟರೂ ಸಂಗಯ್ಯನ ಪ್ರಸಾದವೆಂದು ಸ್ವೀಕರಿಸಿದ್ದೇವೆ. ಆದರೆ, ಇವರು ಹೇಳಿಕೊಳ್ಳುತ್ತಿದ್ದಾರೆ. ನಾವು ಸ್ವಾಭಿಮಾನದಿಂದ ಬದುಕಿರುವವರು. ನಮ್ಮ ಋಣದಲ್ಲಿದ್ದಾರೆ ಎನ್ನುವ ನೋವಿನ ಮಾತುಗಳನ್ನು ಮೀಸಲಾತಿ ಹೋರಾಟ ಆರಂಭ ಆದಾಗಿನಿಂದಲೂ ಕೆಲವರು ಹೇಳುತ್ತಿದ್ದಾರೆ’ ವಿಷಾದದಿಂದ ನುಡಿದರು.

‘ನಾನು ಭಕ್ತರ, ಬಡ ಕೂಲಿಕಾರನ, ಶ್ರಮಿಕನ ಹಾಗೂ ಸಮಾಜದ ಋಣದಲ್ಲಿರಲು ಬಯಸುತ್ತೇನೆಯೇ ಹೊರತು ವ್ಯಕ್ತಿಯ ಋಣದಲ್ಲಿರುವುದಕ್ಕೆ ಇಚ್ಛಿಸುವುದಿಲ್ಲ’ ಎಂದು ನಿರಾಣಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೌನ ವಹಿಸಿದ್ದರಿಂದ ಅನುಮಾನ:

‘ಅವರ ಹೆಸರಿನಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರೂ ನಿರಾಣಿ ಅವರು ಇಂದಿಗೂ ಮೌನ ವಹಿಸಿದ್ದಾರೆ. ಬೇರೆಯವರ ಮೂಲಕ ಹೇಳಿಸುವ ಬದಲಿಗೆ ಅವರಾಗಿಯೇ ಕೇಳಲಿ. ಪದೇ ಪದೇ ಹೇಳುತ್ತಿರುವುದರಿಂದ ಚನ್ನಮ್ಮನ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. 14 ವರ್ಷದಿಂದ ಸಾಕಿದ ಭಕ್ತರ ಋಣದಲ್ಲಿದ್ದೇನೆಯೇ ಹೊರತು ವ್ಯಕ್ತಿಯ ಋಣದಲ್ಲಿಲ್ಲ’ ಎಂದು ಹೇಳಿದರು.

‘ನಾನು ಆ ಪ್ರಚಾರ ಮಾಡಿಸುತ್ತಿಲ್ಲ ಎಂದು ನಿರಾಣಿ ಸ್ಪಷ್ಟವಾಗಿ ತಿಳಿಸಿ ಕ್ಷಮಾಪಣೆ ಕೇಳಲಿ. ಸುಮ್ಮನಿರುವುದರಿಂದ ಅವರೇ ಮಾಡಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಮಾಡಿಸಿಲ್ಲವಾದರೆ ಅವರು ಖಂಡಿಸಬೇಕಿತ್ತಲ್ಲವೇ. ಕೆಲವು ಸ್ವಾಮೀಜಿಗಳ ಮೂಲಕವೂ ಹೇಳಿಸಿದ್ದಾರೆ. ದಾನ ಕೊಟ್ಟಿದ್ದನ್ನು ಬಹಿರಂಗಪಡಿಸುವ ಕೆಲಸವನ್ನು ದೇಶದ ಧಾರ್ಮಿಕ ಇತಿಹಾಸದಲ್ಲಿಯೇ ಯಾರೂ ಮಾಡಿರಲಿಲ್ಲ’ ಎಂದು ಆಕ್ರೋಶ ವ್ಯಕ್ತ‍ಪಡಿಸಿದರು.

‘ರಾಜ್ಯ ಸರ್ಕಾರದಿಂದ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಹಾಗೂ ಕೇಂದ್ರದಿಂದ ಹಿಂದುಳಿದ ವರ್ಗದ ಮೀಸಲಾತಿಗೆ ಹಕ್ಕೊತ್ತಾಯ ಮಂಡಿಸಿ ವರ್ಷದಿಂದ ನಿರಂತರವಾಗಿ ಚಳವಳಿ ನಡೆಸುತ್ತಿದ್ದೇವೆ. ಬಜೆಟ್‌ ಒಳಗಾಗಿ ಮೀಸಲಾತಿ ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದಲ್ಲಿ ಡಿ.16ರಂದು ನಡೆದಿದ್ದ ಸಮಾಜದ ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ಭರವಸೆ ನೀಡಿದ್ದರು. ಆ ಮಾತಿನಂತೆ ನಡೆದುಕೊಂಡು ಮೀಸಲಾತಿ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಕುತಂತ್ರಕ್ಕೆ ಖಂಡನೆ:

‘ಮೀಸಲಾತಿ ಹೋರಾಟ ಹಾಳು ಮಾಡುವುದಕ್ಕಾಗಿ ಸಮಾಜವನ್ನು ಒಡೆಯುತ್ತಿರುವಂತಹ ವ್ಯಕ್ತಿಗಳ ಕುತಂತ್ರವನ್ನು ಸಂಪೂರ್ಣವಾಗಿ ಖಂಡಿಸಲಾಗಿದೆ. ಅವರನ್ನು ನಿರ್ಲಕ್ಷಿಸಬೇಕು ಎಂಬ ಒಮ್ಮತದ ನಿರ್ಣಯಕ್ಕೆ ಬರಲಾಗಿದೆ’ ಎಂದರು.

‘ಮುಖ್ಯಮಂತ್ರಿ ಮೇಲೆ ವಿಶ್ವಾಸವಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ತ್ವರಿತವಾಗಿ ವರದಿ ಪಡೆದುಕೊಂಡೇ ಮೀಸಲಾತಿ ಘೋಷಿಸಲಿ. ಸಮಾಜಕ್ಕೆ ನ್ಯಾಯ ಒದಗಿಸಬೇಕು. ವಿಳಂಬ ಧೋರಣೆ ಅನುಸರಿಸಿದ್ದು ಕಂಡುಬಂದರೆ ಅಂತಿಮ ಹೋರಾಟಕ್ಕೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

‘ಸಮಾಜ ಒಡೆಯುತ್ತಿರುವವರ ಹೆಸರು ಹೇಳಿ ಅವರನ್ನು ದೊಡ್ಡವರನ್ನಾಗಿ ಮಾಡಲು ಬಯಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘3ನೇ ಪೀಠದ ಬಗ್ಗೆ ಗೊತ್ತಿಲ್ಲ. 2ಎ ಮೀಸಲಾತಿ ಗಳಿಸುವುದು ಬಿಟ್ಟರೆ ಬೇರಾವುದಕ್ಕೂ ಗಮನ ಕೊಡುವುದಿಲ್ಲ’ ಎಂದರು.

‘ಮೀಸಲಾತಿ ಸಿಕ್ಕ ನಂತರ ಭಕ್ತರು ಇಚ್ಛಿಸಿದರೆ ಶಾಖಾ ಸ್ಥಾಪಿಸುತ್ತೇನೆ’ ಎಂದು ಹೇಳಿದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮುಖಂಡರಾದ ವಿಜಯಾನಂದ ಕಾಶಪ್ಪನವರ, ಎ.ಬಿ. ಪಾಟೀಲ, ಮಲ್ಲೇಶ, ಶಶಿಕಾಂತ ನಾಯಿಕ, ಡಾ.ವಿಶ್ವನಾಥ ಪಾಟೀಲ, ವೀಣಾ ಕಾಶಪ್ಪನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT