ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

Last Updated 21 ಸೆಪ್ಟೆಂಬರ್ 2019, 10:49 IST
ಅಕ್ಷರ ಗಾತ್ರ

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್‌ನ ಜಿಲ್ಲಾ ಘಟಕದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶರ ಸಾತೇರಿ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಸಮಯದಲ್ಲಿ ಬಿ.ಎಲ್‌.ಓ ಆಗಿ ನೇಮಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಕಾರ್ಯಕರ್ತೆಯರಲ್ಲಿ ಸ್ಮಾರ್ಟ್‌ ಫೋನ್‌ಗಳು ಇಲ್ಲದಿರುವುದರಿಂದ ಮೊಬೈಲ್‌ ಆ್ಯಪ್‌ನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಸರಿಯಾಗಿ ನಿರ್ವಹಿಸಲು ಬರುವುದಿಲ್ಲ. ಹೀಗಾಗಿ, ಬಿ.ಎಲ್‌.ಓ ಕೆಲಸದಿಂದ ಕಾರ್ಯಕರ್ತೆಯರಿಗೆ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೌರವ ಧನವನ್ನು ಹೆಚ್ಚಿಸಿವೆ. ಆದರೆ, ಈವರೆಗೂ ಗೌರವಧನವನ್ನು ಪಾವತಿಸಿಲ್ಲ. ಕೂಡಲೇ, ಗೌರವಧನ ಬಿಡುಗಡೆಗೊಳಿಸಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗೌರವಧನ ಹಾಗೂ ಅಂಗನವಾಡಿ ಕಟ್ಟಡದ ಬಾಡಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಮಾತೃಪೂರ್ಣ ಯೋಜನೆಯನ್ನು ರದ್ದುಪಡಿಸಿ ಮೊದಲಿನಂತೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆಹಾರ ಧಾನ್ಯಗಳನ್ನು ಮನೆಗಳಿಗೇ ವಿತರಣೆ ಮಾಡಲು ಆದೇಶ ಹೊರಡಿಸಬೇಕು. ಕಾರ್ಯಕರ್ತೆಯರಿಂದ ಅಂಗನವಾಡಿ ಕೇಂದ್ರದ ಕೆಲಸವನ್ನು ಹೊರತುಪಡಿಸಿ ಬೇರೆ ಇಲಾಖೆಗಳ ಕೆಲಸ ಮಾಡಿಸಬಾರದು’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಉಪಾಧ್ಯಕ್ಷರಾದ ಮೀನಾಕ್ಷಿ ಕೋಟಗಿ, ಯಲ್ಲೂಬಾಯಿ ಶೀಗಿಹಳ್ಳಿ, ಕಾರ್ಯದರ್ಶಿ ಅನಿತಾ ಕಾಮಾನ್ನಾಚೆ, ಸದಸ್ಯರಾದ ಕಮರುನ್ನಿಸಾ ಬಾಳೇಕುಂದ್ರಿ, ಶೋಭಾ ಗೊಡಗೇರಿ, ಸವಿತಾ ಡಿಗ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT