ಬೆಳಗಾವಿ: ಇಲ್ಲಿನ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಕಾಲೇಜು ಹಾಗೂ ವಿಟಿಯು ಸಹಯೋಗದಲ್ಲಿ ಶುಕ್ರವಾರ ‘ಬೌದ್ಧಿಕ ಹಕ್ಕುಸ್ವಾಮ್ಯ’ ವಿಷಯ ಕುರಿತು ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ ವಕೀಲ ಗಣೇಶ ಹಿಂಗಮೇರಿ ಮಾತನಾಡಿ, ‘ನಾವು ಬೆಳಿಗ್ಗೆಯಿಂದ ರಾತ್ರಿವರೆಗೆ ಉಪಯೋಗಿಸುವ ಪ್ರತಿ ವಸ್ತುವೂ ಬೌದ್ಧಿಕ ಹಕ್ಕು ಸ್ವಾಮ್ಯದಲ್ಲಿ ನೋಂದಣಿಯಾದವೇ ಆಗಿವೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ–ಯುಎಸ್ಎಂ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ‘ನಮ್ಮ ಪೂರ್ವಜರು ಅನೇಕ ವರ್ಷಗಳಿಂದ ವಿವಿಧ ರೀತಿಯ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ಜ್ಞಾನವು ಕೇವಲ ಒಬ್ಬರ ಹಕ್ಕಾಗಿರದೇ ಎಲ್ಲರಿಗೂ ತಲಪಬೇಕೆಂಬ ಆಶಯ ಹೊಂದಿದ್ದರು’ ಎಂದರು.
ಕೆಎಲ್ಇ ಸಂಸ್ಥೆ ಮಾಜಿ ಕಾರ್ಯದರ್ಶಿ ಡಾ.ಎಸ್.ವಿ. ಮಾನ್ವಿ ಮಾತನಾಡಿ, ‘ಭಾರತಕ್ಕೆ 1970ರಿಂದಲೂ ಬೌದ್ಧಿಕ ಹಕ್ಕುಸ್ವಾಮ್ಯ ಪ್ರವೇಶಿಸಿದೆ. ಆಗಿನಿಂದಲೂ ನೋಂದಣಿ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿಲ್ಲ’ ಎಂದು ತಿಳಿಸಿದರು.
ಎಸ್ಜಿಬಿಐಟಿ ಕಾಲೇಜು ಅಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ. ಸಂಬರಗಿಮಠ ಇದ್ದರು. ಪ್ರಾಚಾರ್ಯ ಡಾ.ಸಿದ್ದರಾಮಪ್ಪ ಇಟ್ಟಿ ಸ್ವಾಗತಿಸಿದರು.ಸೌಮ್ಯಾ ಸ್ವಾಗತಗೀತೆ ಹಾಡಿದರು. ಪ್ರೊ.ಮಾನಸಾ, ಪ್ರೊ.ಅಶ್ವಿನಿ ನಿರೂಪಿಸಿದರು. ಕೆ.ಬಿ. ಜಗದೀಶಗೌಡ ವಂದಿಸಿದರು.