ಅಥಣಿ: ‘ಪ್ರವಾಹ ಸಂಸತ್ರಸ್ತರ ಮನೆಗಳನ್ನು ಸಮೀಕ್ಷೆ ಮಾಡುವಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿದ್ದು, ತಕ್ಷಣವೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಅಶೋಕ ದಾನಗೌಡರ ನೇತೃತ್ವದಲ್ಲಿ ರೈತರು ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರೆಪ್ಪನವರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ತಾಲ್ಲೂಕಿನ ಶಿರಹಟ್ಟಿ ಗ್ರಾಮದ ಮನೆಗಳು ಮತ್ತು ತೋಟದ ನಿವೇಶನಗಳು ಪ್ರವಾಹ ಬಂದಾಗ ಸಂಪೂರ್ಣವಾಗಿ ಮುಳುಗಡೆಯಾಗಿವೆ. ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಇತರರ ಹಾಳಾದ ಶೆಡ್ ಹಾಗೂ ಮನೆಗಳನ್ನು ಸರ್ವೇ ಮಾಡದೇ, ಫಲಾನುಭವಿಗಳ ಹೆಸರು ನೋಂದಾಯಿಸದೇ ಅಕ್ರಮ ಮಾಡುತ್ತಿದ್ದಾರೆ. ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.