ರಾಮದುರ್ಗ: ವರ್ಷದಲ್ಲಿ ನಾಲ್ಕು ಸಾರಿ ಜರುಗುವ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆಗೆ ಬೇಜವಾಬ್ದಾರಿಯುತ ವರ್ತಿಸುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ‘ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಿಗೆ ಬರುವ ಬಹುತೇಕ ಅಧಿಕಾರಿಗಳು ಪ್ರಗತಿ ಮಾಹಿತಿ ನೀಡುತ್ತಿಲ್ಲ. 15 ದಿನಗಳ ಮುಂಚೆಯೇ ನೋಟಿಸ್ ನೀಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸಿಡಿಮಿಡಿಗೊಂಡರು.
ಕೆಡಿಪಿ ಸಭೆಗೆ ಇಲಾಖೆಯ ಮುಖ್ಯಸ್ಥರೆ ಖುದ್ದಾಗಿ ಹಾಜರಾಗಿ ಪಾಲ್ಗೊಳ್ಳಬೇಕು. ಕೆಳಮಟ್ಟದ ಅಧಿಕಾರಿಗಳನ್ನು ಸಭೆಗೆ ಕಳಿಸಿ ಉಳಿದವರು ನುಣಚಿಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದ ಅವರು, ಸಭೆಗೆ ಸೂಕ್ತ ಮಾಹಿತಿಗಳನ್ನು ನೀಡದ ಕಂದಾಯ ಇಲಾಖೆಯ ಗ್ರೇಡ್–2 ತಹಶೀಲ್ದಾರ್ ರುಕ್ಮೀಣಿ ದಂಡೇಕರ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಇಂತಿಷ್ಟು ವರ್ಷ ಬಾಳಿಕೆ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುವ ನಿಯಮ ಜಾರಿ ಮಾಡಬೇಕು ಎಂದು ತಿಳಿಸಿದರು.
ಡಿವೈಎಸ್ಪಿ ರಾಮನಗೌಡ ಹಟ್ಟಿ, ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಆಡಳಿತಾಧಿಕಾರಿ ಬಸವರಾಜ ವರವಟ್ಟಿ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಲ್ಲೂಕು ಪಂಚಾಯ್ತಿ ಇಒ ಮುರಳೀಧರ ದೇಶಪಾಂಡೆ ಇದ್ದರು.