ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚಿಂಚಲಿ ರೈಲು ನಿಲ್ದಾಣದ ತುಸು ದೂರದಲ್ಲಿಯೇ ಭಾನುವಾರ ಬೆಳಿಗ್ಗೆ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ 16 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕುರಿಗಾಹಿ ವಸಂತ ಜಾವೇದಾರ್ ಅವರು ಕುರಿಗಳ ಸಮೇತ ರೈಲ್ವೆ ಹಳಿ ದಾಟುತ್ತಿದ್ದರು. ಬೀದಿನಾಯಿಗಳ ಗುಂಪು ಕುರಿಗಳ ಮೇಲೆ ದಾಳಿ ಮಾಡಿತು. ಇದರಿಂದ ಬೆಚ್ಚಿದ ಕುರಿಗಳು ಹಳಿಗಳ ಮೇಲೆ ಓಡಿದವು. ಇದೇ ವೇಳೆ ವೇಗವಾಗಿ ಬಂದ ಜೋಧ್ಪುರ ಎಕ್ಸ್ಪ್ರೆಸ್ ರೈಲು ಕುರಿಗಳ ಮೇಲೆ ಹರಿಯಿತು.
ಸತ್ತ ಎಲ್ಲ 16 ಕುರಿಗಳು ಇನ್ನೆರಡು ತಿಂಗಳಲ್ಲಿ ಮರಿ ಹಾಕುವುದರಲ್ಲಿದ್ದವು. ಅವುಗಳ ಸಾವಿನಿಂದ ₹ 2 ಲಕ್ಷ ನಷ್ಟವಾಗಿದೆ ಎಂದು ಮಾಲೀಕ ತಿಳಿಸಿದ್ದಾರೆ.
ಪಿಎಸ್ಐ ವೆಂಕಟೇಶ, ಸಿಬ್ಬಂದಿ ಸುರೆಂದ್ರ ವಿಭೂತಿ, ಲಕ್ಷ್ಮಣ ನಾವಿ, ಓಗೆಪ್ಪ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.