ಬೆಳಗಾವಿ: ‘ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕು’ ಎಂದು ವಕೀಲ ಎಂ.ಜಿ. ಝಿರಲಿ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಗೊಳ್ಳಿರಾಯಣ್ಣ ಘಟಕ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದು ದೇಶ ಪ್ರಬಲವಾಗಿ ಬೆಳೆಯಬೇಕಾದರೆ ಅಲ್ಲಿ ತತ್ವಜ್ಞಾನ ಮತ್ತು ದರ್ಶನಗಳ ಕುರಿತು ಎಷ್ಟು ಚಿಂತನೆ ಹಾಗೂ ಚರ್ಚೆಗಳು ನಡೆದಿವೆ ಎನ್ನುವುದು ಮುಖ್ಯವಾಗುತ್ತದೆ. ಸೇನೆಗಳಿಂದ ಮಾತ್ರವೇ ಆ ದೇಶ ಪ್ರಬಲವಾಗಿರುವುದಿಲ್ಲ. ಬದಲಿಗೆ ಅದು ಎಷ್ಟು ಜನ ತತ್ವಜ್ಞಾನಿಗಳನ್ನು ಹೊಂದಿದೆ ಎನ್ನುವುದನ್ನೂ ಅವಲಂಬಿಸಿರುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಮಾತನಾಡಿ, ‘ಕನ್ನಡದ ಕೆಲಸಗಳು ಬಹಳ ನಡೆಯಬೇಕು. ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳ ರೀತಿಯಲ್ಲಿ ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗವೂ ಬೆಳೆಯಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನೀಡಲಾಗುವುದು’ ಎಂದು ತಿಳಿಸಿದರು.
ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಶೋಭಾ ನಾಯಕ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದ್ದಕ್ಕೆ ಸನ್ಮಾನಿಸಲಾಯಿತು.
ಆರ್ಸಿಯು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ.ಎಸ್.ಎಂ. ಗಂಗಾಧರಯ್ಯ, ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿದರು.
ಕುಲಸಚಿವರು ಪ್ರೊ.ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ ಇದ್ದರು.
ರಾಖಿ ಕಲ್ಪತ್ರಿ ಪ್ರಾರ್ಥಿಸಿದರು. ಉಪ ಪ್ರಾಚಾರ್ಯರು ಅನಿಲ ರಾಮದುರ್ಗ ಪರಿಚಯಿಸಿದರು. ಡಾ.ವೈ.ಎ. ಜಕ್ಕಣ್ಣವರ ವಂದಿಸಿದರು.