ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವ ಕನ್ನಡಪರ ಹೋರಾಟಗಾರರು, ಅದನ್ನು ತೆರವುಗೊಳಿಸದಂತೆ ಒತ್ತಡ ಹೇರಿ ಸ್ಥಳದಲ್ಲಿ ಮಂಗಳವಾರವೂ ಧರಣಿ ಮುಂದುವರಿಸಿದ್ದಾರೆ.
ಕೊರೆಯುವ ಚಳಿಯಲ್ಲೂ ಅವರು ಸೋಮವಾರ ಅಹೋರಾತ್ರಿ ಅಲ್ಲೇ ಮಲಗಿದ್ದರು. ಕನ್ನಡ ಅಭಿಮಾನಿಗಳು ತಂದುಕೊಟ್ಟ ಪುಲಾವ್, ಮೈಸೂರು ಪಾಕ್, ಲಡ್ಡು ಸವಿದರು. ಅಭಿಮಾನಿಗಳು ಅವರಿಗೆ ಹೊದಿಕೆ ನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮಂಗಳವಾರ ಬೆಳಿಗ್ಗೆಯೂ ಕನ್ನಡಾಭಿಮಾನಿಗಳು ಅವರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು.
ಹೋರಾಟಗಾರರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಾಲಕರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ ನೇತೃತ್ವದಲ್ಲಿ ರೈತರು ಬೆಂಬಲ ಸೂಚಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಮಹಾದೇವ ತಳವಾರ ಮೊದಲಾದವರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಆಚರಿಸಲಾಯಿತು. ‘ಯಾವುದೇ ಕಾರಣಕ್ಕೂ ಧ್ವಜ ಸ್ತಂಭ ತೆರವುಗೊಳಿಸಬಾರದು’ ಎಂದು ಒತ್ತಾಯಿಸಿದರು. ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಫೋಟೊಗೆ ಪೂಜೆ ಸಲ್ಲಿಸಲಾಯಿತು.
ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಮುಖಂಡರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು.
ಹೋರಾಟಗಾರರಾದ ಶ್ರೀನಿವಾಸ ತಾಳೂಕರ, ಕಸ್ತೂರಿ ಬಾವಿ ಮೊದಲಾದವರು ಇದ್ದರು.