ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಾಗವಾಡದಲ್ಲಿ ಜನವರಿ ಎರಡನೇ ವಾರದಲ್ಲಿ ನಡೆಸಲು ಯೋಜಿಸಲಾಗಿದೆ.
ಈ ಬಗ್ಗೆ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರೊಂದಿಗೆ ಪದಾಧಿಕಾರಿಗಳು ಚರ್ಚಿಸಿದರು. ‘ಗಡಿ ಭಾಗದಲ್ಲಿ ಸಮ್ಮೇಳನ ನಡೆಸುವುದೇ ಸೂಕ್ತ’ ಎಂದು ತಿಳಿಸಿದ ಕೋರೆ, ಸಮ್ಮೇಳನದ ಯಶಸ್ಸಿಗೆ ಸಕಲ ವ್ಯವಸ್ಥೆ, ಸಹಾಯ ನೀಡುವಂತೆ ಕಾಗವಾಡದ ಶಿವಾನಂದ ಕಾಲೇಜಿನ ಪ್ರಾಚಾರ್ಯ ಮತ್ತಿತರರಿಗೆ ಸೂಚಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ತಾಲ್ಲೂಕು ಘಟಕಗಳ ಅಧ್ಯಕ್ಷರು, ಗೌರವ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ಭಾಗವಹಿಸಿದ್ದರು.
ಬಳಿಕ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿಯಾದ ಕಸಾಪ ನಿಯೋಗವು ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳನ್ನು ಮಾಡಲು ಅನುಮತಿ ನೀಡುವಂತೆ ಕೋರಿದರು.
‘ಕೋವಿಡ್ ನಿಯಮಗಳನ್ನು ಪಾಲಿಸಿ ಜನವರಿಯಲ್ಲಿ ಸಮ್ಮೇಳನಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು’ ಎಂದು ತಿಳಿದುಬಂದಿದೆ.
ಖಾನಾಪುರದಲ್ಲಿ ಕನ್ನಡ ಭವನಕ್ಕಾಗಿ ನೀಡಿರುವ ನಿವೇಶನದ ಖಾತೆಯನ್ನು ತಕ್ಷಣವೇ ಮಾಡಿಕೊಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಫೋನ್ನಲ್ಲಿ ಸೂಚನೆ ನೀಡಿದರು.