ಅಥಣಿ: ‘ಕಾರ್ಮಿಕರ ಮಕ್ಕಳು ಒಳ್ಳೆಯ ಅಂಕ ಗಳಿಸಿದರೆ ಅದು ನಿಜವಾದ ಸಾಧನೆಯೇ ಸರಿ’ ಎಂದು ಎಂಜಿನಿಯರ್ ಅಮರ ದುರ್ಗಣ್ಣವರ ತಿಳಿಸಿದರು.
ಬುಧವಾರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಟ್ಟಡ ಕಾರ್ಮಿಕರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾರ್ಮಿಕರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಅವರು ಬೇರೆಯವರಿಗೆ ಮನೆ ಕಟ್ಟಿಕೊಡುತ್ತಾರೆ. ಆದರೆ, ಅವರಿಗೆ ಮನೆ ಇರುವುದಿಲ್ಲ’ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ ಮೋಪಗಾರ ಮಾತನಾಡಿ, ‘ಸರ್ಕಾರದಿಂದ ನೀಡಲಾಗುತ್ತಿರುವ ಯೋಜನೆಗಳ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಇದರಿಂದಾಗಿ, ಬಹಳಷ್ಟು ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಮುಖ್ಯವಾಹಿನಿಯಿಂದ ದೂರ ಉಳಿಯುತ್ತಿದ್ದಾರೆ’ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ, ಕಾರ್ಮಿಕ ನಿರೀಕ್ಷಕರ ತೀರ್ಥಬಾಬು, ಮುಖಂಡರಾದ ಕುಮಾರ ಬಡಿಗೇರಿ, ಶ್ರೀಧರ ಚವಾಣ, ಅಶೋಕ ಸಿಜೋಳಿ, ಹನಮಂತ ಮಾಕಾಣಿ, ಶಿವಾನಂದ ಲಂಗೋಟಿ ಇದ್ದರು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.