ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ, ಸಂತ್ರಸ್ತರ ಪುನರ್ವಸತಿಗೆ ಸಹಕಾರ

ಸರ್ಕಾರೇತರ ಸಂಘ–ಸಂಸ್ಥೆ ಪ್ರತಿನಿಧಿಗಳ ಭರವಸೆ
Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ‘ಇಡೀ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ 10 ದಿನಗಳ ಕಾಲ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಈಗ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿನ ದೊಡ್ಡ ಸವಾಲಾಗಿದ್ದು, ಸಂಘ-ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

‌ಇಲ್ಲಿ ಶುಕ್ರವಾರ ನಡೆದ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘327 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 497 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ವೇಳೆ ಸಾರ್ವಜನಿಕರು, ದಾನಿಗಳು, ಸಂಘ-ಸಂಸ್ಥೆಗಳವರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಸ್ವಚ್ಛತೆಗೆ ಕೈಜೋಡಿಸಲು ಮನವಿ:

‘ಪ್ರವಾಹದಿಂದ ಬಾಧಿತವಾದ ಗ್ರಾಮಗಳನ್ನು ಸ್ವಚ್ಛಗೊಳಿಸಿ ಸಂತ್ರಸ್ತರನ್ನು ಅಲ್ಲಿಗೆ ಕಳುಹಿಸಬೇಕು. ಸಂಘ-ಸಂಸ್ಥೆಗಳಿಗೆ ಗ್ರಾಮಗಳ ಪಟ್ಟಿ ನೀಡಲಾಗುವುದು. ಸ್ವಚ್ಛತೆಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸಲಾಗುವುದು. ಇವುಗಳನ್ನು ಬಳಸಿ ಶ್ರಮದಾನ ಮಾಡಬೇಕು’ ಎಂದರು.

ಪುನರ್ವಸತಿಗೆ ಸಂಘ-ಸಂಸ್ಥೆಗಳ ಮೂಲಕ ಮುಂದೆ ಮಾಡಬೇಕಿರುವ ಕೆಲಸಗಳ ಬಗ್ಗೆ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ವಿವರಿಸಿದರು.

ನೆರವಿಗೆ ಸಿದ್ಧ:

‘ಬೆಳಗಾವಿ ಪ್ರಾಂತ ಸಮಾಜ ಸೇವಾ ಸಂಸ್ಥೆಯು ಸ್ವಚ್ಛತೆ, ಸಂತ್ರಸ್ತರಿಗೆ ಒಂದು ತಿಂಗಳ ‍ಪಡಿತರ ಒದಗಿಸಲು ತೀರ್ಮಾನಿಸಿದ್ದು, ಖಾನಾಪುರ ಮತ್ತು ಚಿಕ್ಕೋಡಿ ತಾಲ್ಲೂಕುಗಳ ಸಾವಿರ ಕುಟುಂಬಗಳಿಗೆ ನೇರವಾಗಿ ಪರಿಹಾರ ತಲುಪಿಸಲಿದ್ದೇವೆ’ ಎಂದು ಫಾದರ್ ಪೀಟರ್ ಆಶೀರ್ವಾದ ತಿಳಿಸಿದರು.

ಜಿತೋ ಸಂಸ್ಥೆಯ ಅಮಿತ್ ದೋಷಿ ಮಾತನಾಡಿ, ‘ಸಂಸ್ಥೆ ವತಿಯಿಂದ ಈಗಾಗಲೇ ವೈದ್ಯಕೀಯ ಶಿಬಿರ ನಡೆಸಿದ್ದೇವೆ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ದಾನಿಗಳು ಕಳುಹಿಸುವ ಸಾಮಗ್ರಿಗಳನ್ನು ಮಹಾವೀರ ಭವನದಲ್ಲಿ ಸಂಗ್ರಹಿಸಲಾಗಿದ್ದು, ಆದ್ಯತೆ ಮೇರೆಗೆ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕೆಲಸ ಮಾಡುತ್ತೇವೆ:ರೊಟೇರಿಯನ್‌ ‌ರಾಜೇಶ್ ಕುಮಾರ್ ಮತನಾಡಿ, ‘ರೋಟರಿ ಕ್ಲಬ್ ವತಿಯಿಂದ ಈಗಾಗಲೇ ಪರಿಹಾರ ಸಾಮಗ್ರಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಗ್ರಾಮಗಳನ್ನು ಗುರುತಿಸಿ ತಿಳಿಸಿದರೆ ಅಲ್ಲಿ ಕೆಲಸ ಮಾಡಲು ಸಿದ್ಧವಿ‌ದ್ದೇವೆ’ ಎಂದರು.

ಲೆಕ್ಕಪತ್ರಗಳ ಪರಿಶೋಧಕರ ಸಂಘದವರು ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ ನೀಡುವುದಾಗಿ ತಿಳಿಸಿದರು.

ಮದೀನಾ ಮಸೀದಿ ರಿಲೀಫ್ ಫೌಂಡೇಷನ್ ಸಲೀಂ ಮಾತನಾಡಿ, ‘40 ಟನ್ ಅಕ್ಕಿ ಹಾಗೂ 6ಸಾವಿರ ಕುಡಿಯುವ ನೀರಿನ ಬಾಟಲಿಗಳು, ದಾನಿಗಳು ನೀಡಿರುವ 25ಸಾವಿರ ಬ್ಲಾಂಕೆಟ್ ಮೊದಲಾದವುಗಳನ್ನು ವಿತರಿಸಲಾಗಿದೆ. ಗೋಕಾಕ ಮತ್ತಿತರ ತಾಲ್ಲೂಕಿನ 50ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ನೆರವಾಗಿದ್ದೇವೆ’ ಎಂದರು.

ಸ್ವಚ್ಛತೆಗೆ ಶ್ರಮದಾನ, ವೈದ್ಯಕೀಯ ಶಿಬಿರಗಳ ಆಯೋಜನೆ, ಔಷಧ ಹಾಗೂ ಆಹಾರ ಸಾಮಗ್ರಿ ವಿತರಣೆ, ಸ್ವಯಂಸೇವಕರನ್ನು ಒದಗಿಸುವುದು, ಶೌಚಾಲಯ ನಿರ್ಮಾಣ, ತ್ಯಾಜ್ಯ ವಿಲೇವಾರಿಗೆ ಸಹಕರಿಸುವುದಾಗಿ ಸಂಘ-ಸಂಸ್ಥೆಗಳವರು ಭರವಸೆ ನೀಡಿದರು.

‘ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಲು ಸಿದ್ಧವಿದ್ದೇವೆ’ ಎಂದು ದಲಿತ ಮುಖಂಡ ಮಲ್ಲೇಶಿ ಚೌಗಲೆ ಹೇಳಿದರು.

‘ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ 2ಸಾವಿರ ಕಾರ್ಯಕರ್ತರಿದ್ದು, ಯಾವುದೇ ಸಂದರ್ಭದಲ್ಲೂ ಜಿಲ್ಲಾಡಳಿತ ನೀಡುವ ಕೆಲಸ ಮಾಡಲು ಸನ್ನದ್ಧರಾಗಿದ್ದೇವೆ’ ಎಂದು ಮುಖಂಡ ಫೈಜಲ್ ಪಠಾಣ ಭರವಸೆ ನೀಡಿದರು.

ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT