ಬೆಳಗಾವಿ: ‘ನಿಮಗೆ ₹10 ಸಾವಿರ ಪರಿಹಾರ ನೀಡಿದ್ದೇ ಹೆಚ್ಚು ಹೋಗ್ರಿ...’ ಎಂದು ಹೇಳಿಕೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಚಿಕ್ಕೋಡಿ ತಾಲ್ಲೂಕಿನ ಯಡೂರಿನಲ್ಲಿ ಪ್ರವಾಹ ಸಂತ್ರಸ್ತರು ಶನಿವಾರ ಧಿಕ್ಕಾರ ಹಾಕಿದರು. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮುತ್ತಿಗೆ ಹಾಕಿ, ಗುದ್ದಿ ಆಕ್ರೋಶ ವ್ಯಕ್ತಪಡಿಸಿದರು.
ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿ ಸಚಿವರು ವಾಪಸ್ಸಾಗುತ್ತಿದ್ದಾಗ ಸಂತ್ರಸ್ತರು, ‘ನಮಗೆ ತುರ್ತು ಪರಿಹಾರವಾಗಿ ಕೊಟ್ಟ ₹10 ಸಾವಿರ ಸಾಕಾಗುತ್ತಿಲ್ಲ. ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂದು ಕೋರಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, 'ಅಷ್ಟು ಕೊಟ್ಟಿರುವುದೇ ಹೆಚ್ಚು' ಎಂದರು. ಇದರಿಂದ ರೊಚ್ಚಿಗೆದ್ದ ಸಂತ್ರಸ್ತರು, ಕಾರು ಅಡ್ಡಗಟ್ಟಿ, ಬ್ಯಾನೆಟ್ ಗುದ್ದಿದರು. ತಕ್ಷಣ ಪೊಲೀಸರು ಬಂದು, ಸಂತ್ರಸ್ತರನ್ನು ಚದುರಿಸಿದರು.