ಬೆಳಗಾವಿ: ‘ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ನಡೆ ಅಕ್ಷಮ್ಯ. ಆದರೂ ಕರ್ನಾಟಕ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಶಾಂತಿ ಕಾಪಾಡಲು ಅಮಿತ್ ಶಾ ಅವರು ಕರೆದ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರಸ್ಕಾರ ಮಾಡಬೇಕಿತ್ತು. ಆ ಮೂಲಕ ರಾಜ್ಯದ ಜನರ ಅಭಿಪ್ರಾಯ ತಿಳಿಸಬೇಕಿತ್ತು’ ಎಂದು ಶಾಸಕ ಎಚ್.ಕೆ. ಪಾಟೀಲ ಅಭಿಪ್ರಾಯ ಪಟ್ಟರು.
‘ಗಡಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ ಗಂಭಿರವಾಗಿಲ್ಲ. ಗಡಿ ಕನ್ನಡಿಗರ ಕಾಳಜಿಯೂ ಇಲ್ಲ. ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಗೃಹಸಚಿವರು ಸಭೆ ಕರೆಯುತ್ತಾರೆ. ಹಾಗೆಂದರೆ, ಗಡಿಯಲ್ಲಿ ಅಶಾಂತಿ ತಾಂಡವಾಡುತ್ತಿದೆ ಎಂದು ಇವರೇ ಪುರಾವೆ ಸೃಷ್ಟಿ ಮಾಡಿಸಿದಂತೆ ಆಯಿತಲ್ಲ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
‘ಮಹಾಜನ್ ವರದಿಯೇ ಅಂತಿಮ ಎಂದು ನಾವು ನಿರ್ಣಯಿಸಿ ಆಗಿದೆ. ವಿಧಾನಸಭೆ, ವಿಧಾನಪರಿಷತ್ನಲ್ಲಿ ನಿರ್ಣಯ ಮಾಡಿದ್ದೇವೆ. ಹಾಗಿದ್ದ ಮೇಲೆ ಅಮಿತ್ ಶಾ ಅವರ ಸಂಧಾನ ಏಕೆ ಬೇಕಿತ್ತು? ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ಖಂಡತುಂಡವಾಗಿ ಬೇಳಬೇಕಿದ್ದರೆ ಆ ಸಭೆಯನ್ನು ಬಹಿಷ್ಕರಿಸಬೇಕಿತ್ತು. ಅಲ್ಲಿಗೆ ಹೋಗುವ ಮೂಲಕ ಬೊಮ್ಮಾಯಿ ಅವರೇ ಮಹಾರಾಷ್ಟ್ರಕ್ಕೆ ಒಂದು ಅಸ್ತ್ರ ನೀಡಿದಂತಾಗಿದೆ’ ಎಂದೂ ಕಿಡಿ ಕಾರಿದರು.
‘ಸರ್ಕಾರ ತಕ್ಷಣ ಸರ್ವಾನುಮತದ ನಿರ್ಣಯ ಮಾಡದಬೇಕು. ಅಮಿತ್ ಶಾ ಸಭೆಗೆ ಹೋಗಿ ತಪ್ಪು ಹೆಜ್ಜೆ ಇಟ್ಟಿರುವ ಸರ್ಕಾರ ಜನರ ಕ್ಷಮೆ ಕೇಳಬೇಕು’ ಎಂದೂ ಅವರು ಆಗ್ರಹಿಸಿದರು.
* ಜನರಿಗೆ ಬೇಕಿರುವುದು ನೆಮ್ಮದಿ, ವಿವಾದವಲ್ಲ: ‘ಬೆಳಗಾವಿಯಲ್ಲಿ ಮರಾಠಿ ಜನರೇ ಎಂಇಎಸ್ ಸಂಘಟನೆಯನ್ನು ತಿರಸ್ಕರಿಸಿದ್ದಾರೆ. 1994ರಲ್ಲಿ ನಾನು ಶಾಸಕನಾದಾಗ ಎಂಇಎಸ್ ಬೆಂಬಲಿತ ಏಳು ಶಾಸಕರು ಇದ್ದರು. ಈಗ ಒಬ್ಬರೂ ಇಲ್ಲ. ಮಹಾನಗರ ಪಾಲಿಕೆಯಲ್ಲೂ ಬೆರಳೆಣಿಕೆಯಷ್ಟು ಸದಸ್ಯರು ಇದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಗಡಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ರಾಜಕೀಯ ಲಾಲಸೆಗಾಗಿ ಎಂಇಎಸ್, ಶಿವಸೇನೆ, ಮಹಾರಾಷ್ಟ್ರದ ಬಿಜೆಪಿಯವರು ಈ ತಂಟೆ ತೆಗೆಯುತ್ತಿದ್ದಾರೆ. ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿ ಪ್ರಕರಣವಿದೆ. ಅದು ತೀರ್ಪು ನೀಡುವವರೆಗೆ ಸುಮ್ಮನಿರಬೇಕು’ ಎಂದರು.