ಬೆಳಗಾವಿ: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಟಿ)ಯ ಪೀಠಕ್ಕೆ ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಒಂದು ಎಕರೆ ಜಮೀನನ್ನು (ರಿ.ಸ.ನಂ.189/ಅ2) ಮಂಜೂರು ಮಾಡಲಾಗಿದೆ. ಇದರೊಂದಿಗೆ ಸ್ವಂತ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರ ಆದೇಶದ ಮೇರೆಗೆ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯ ಟಿ.ನಾರಾಯಣಸ್ವಾಮಿ ಮತ್ತು ವಿಲೇಖನಾಧಿಕಾರಿ ಕೆ.ಎಸ್. ನಾಗರತ್ನಾ ಅವರಿಗೆ ಉಚಗಾಂವ ಕಂದಾಯ ಇನ್ಸ್ಪೆಕ್ಟರ್ ಉದಯ ಖಾತೆದಾರ ಅವರು ಭೂಸ್ವಾಧೀನ ಪತ್ರ(ಕಬ್ಜ ಪಾವತಿ)ವನ್ನು ಹಸ್ತಾಂತರಿಸಿದರು.
ವಕೀಲರಾದ ಸಂಪತ್ ನೇಮಗೌಡ, ಸಂತೋಷ ಶಹಾಪುರ, ಎಸ್.ಎನ್. ಗೌಡರ್, ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಸುಧೀರ ಚವ್ಹಾಣ, ಜಂಟಿ ಕಾರ್ಯದರ್ಶಿ ಬಂಟಿ ಕಪಾಹಿ, ಮ್ಯಾನೇಜಿಂಗ್ ಕಮಿಟಿ ಸದಸ್ಯರಾದ ಇರ್ಫಾನ್ ಬಯಾಲ್, ಎನ್.ಆರ್. ಪಾಟೀಲ, ಹಿಂಡಲಗಾ ಗ್ರಾಮ ಲೆಕ್ಕಾಧಿಕಾರಿ, ಭೂಮಾಪಕರು, ಅನಂತ ಶಿಂಧೆ ಇದ್ದರು.