ಹಾಸನ: ವಿದೇಶದಿಂದ ಕಪ್ಪು ಹಣ ತರುವ ನಿಟ್ಟಿನಲ್ಲಿ ನಾವು (ಕೇಂದ್ರ ಸರ್ಕಾರ) ಪ್ರಮಾಣಿಕ ಪ್ರಯತ್ನ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಈಗಾಗಲೇ ಎಷ್ಟು ಹಣ ದೇಶಕ್ಕೆ ಬಂದಿದೆ ಎಂಬ ಬಗ್ಗೆ ನನ್ನ ಬಳಿ ಅಂಕಿ ಅಂಶ ಇಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು,‘ಮಹದಾಯಿ ವಿವಾದ ಬಗೆಹರಿಸಲು ಅಡ್ಡಗಾಲು ಹಾಕಿದ್ದು ಕಾಂಗ್ರೆಸ್’ ಎಂದು ವಾಗ್ದಾಳಿ ನಡೆಸಿದರು.
ಪೇಜಾವರ ಶ್ರೀಗಳು ಕೇಂದ್ರ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳಿಲ್ಲ. ಕಪ್ಪುಹಣ ವಾಪಸ್ ತರಲು, ಗಂಗಾ ನದಿ ನೈರ್ಮಲ್ಯೀಕರಣಕ್ಕೆ ಒತ್ತು ನೀಡಿ ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಈಗಾಗಲೇ ಹಣ್ಣಾಗಿದೆ. ಯಾವಾಗ ಬೇಕಾದರೂ ನೆಲಕ್ಕೆ ಬೀಳಬಹುದು, ಹಣ್ಣಿಗೆ ನಿಫಾ ಸೋಂಕು ಅಂಟಿದೆ ಎಂದು ವ್ಯಂಗ್ಯವಾಡಿದರು.
ದೋಸ್ತಿ ಸರ್ಕಾರ ಬಿದ್ದುಹೋದರೆ ನಾವು ಸರಕಾರ ರಚನೆ ಮಾಡಲು ಸಿದ್ಧರಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರ ಅಲ್ಲೀವರೆಗೂ ಸರ್ಕಾರ ಉಳಿದರೆ ತಾನೆ ಆ ಪ್ರಶ್ನೆ ಬರೋದು ಎಂದು ಗೇಲಿ ಮಾಡಿದರು.
ಕೇಂದ್ರ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭ ನೀಡಿದ್ದ ಭರವಸೆಗಳನ್ನು ಪ್ರಧಾನಿ ಮೋದಿ ಈಡೇರಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ತರಲಾಗಿದೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ತಿಳಿಸಿದರು.
ಪೆಟ್ರೋಲಿಯಂ ಜಿಎಎಸ್ಗೆ ವ್ಯಾಪ್ತಿಗೆ ಒಳಪಟ್ಟ ನಂತರ ಇಂಧನ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದರು.