ಕೌಜಲಗಿ: ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಮಂಗಳವಾರ ಆಚರಿಸಲಾಯಿತು.
ಇಲ್ಲಿನ ಹಿರೇಮಸೀದಿಯ ಲಾಲಸಾಬಅಲಿ ನಗಾರ್ಚಿ ಓಣಿಯ ಕಾಶಿಮದುಲಾ (ಸಿಂಪಿ ಶಿವಪ್ಪ)ಪೇಟೆ, ಮಖಾನದಾರ, ಸುಬೇದಾರ ಓಣಿಗಳಲ್ಲಿ ಸ್ಥಾಪಿಸಲಾಗಿದ್ದ ಪಂಜಾಗಳು ಮೊಹರಂನ ಕೊನೆಯ ದಿನವಾದ ಮಂಗಳವಾರ ಬಸವೇಶ್ವರ ಪೇಟೆಯಲ್ಲಿ ಹಾಗೂ ಸಂಜೆ ಗ್ರಾಮ ಪಂಚಾಯ್ತಿ ಸಮೀಪದ ಬಸ್ ನಿಲ್ದಾಣದ ಬಯಲಿನಲ್ಲಿ ಸಮ್ಮಿಲನಗೊಂಡವು.
ಇಲ್ಲಿಯ ಪ್ರಮುಖ ಪಂಜಾ(ದೇವರು) ಕಾಶಿಮ ದುಲಾ ಹಿಂದೂಗಳ ಸಿಂಪಿ ಶಿವಪ್ಪ ದೇಸಗತಿ ವಾಡೆಗೆ (ಸದರ) ತೆರಳಿ ದೇಸಾಯಿ ಕುಟುಂಬದವರಿಗೆ ಆಶೀರ್ವದಿಸಿ ಬರುವುದು ಇಲ್ಲಿನ ವಿಶೇಷ. ಬಳಿಕ ದೇಸಗತಿಯ ಸೇವಕರಾದ ದಳವಾಯಿ, ಊರಗೌಡ ಪ್ರಮುಖರಿಗೆ ಭವಿಷ್ಯವಾಣಿ ಹೇಳಿ ಪಂಜಾಗಳು ಭೇಟಿಯಾಗಿ, ಸಿಂಪಿ ಶಿವಪ್ಪ (ಕಾಶಿಮದುಲಾ) ದಕ್ಷಿಣ ದಿಕ್ಕಿನೆಡೆಗೆ ಹಾಗೂ 20ಕ್ಕೂ ಹೆಚ್ಚು ಪಂಜಾಗಳು ಉತ್ತರ ದಿಕ್ಕಿನೆಡೆಗೆ ನಿರ್ಗಮಿಸಿದವು. ರಕ್ತದರ್ಪಣೆಯ ಬಾರುಕೋಲು ಆಟ, ಕೋಲಾಟ ನಡೆಯಿತು.
ಮುಖಂಡರಾದ ಎಂ.ಡಿ. ಖಾಜಿ, ದೊಂಡಿಬಾ ಖಟಾವಕರ, ಡಾ.ಆರ್.ವೈ. ಸಣ್ಣಕ್ಕಿ, ಜಕೀರಸಾಬ ಜಮಾದರ, ಅಶೋಕ ಉದ್ದಪ್ಪನವವರ, ರವಿ ಪರುಶೆಟ್ಟಿ, ನೀಲಪ್ಪ ಕೇವಟಿ, ರಾಯಪ್ಪ ಬಳೋಲದಾರ, ದಸ್ತಗೀರ ಎಸ್. ನದಾಫ, ಹಾಸಿಂ ನಗಾರ್ಚಿ, ಸಯ್ಯದ ನಗಾರ್ಚಿ ಇದ್ದರು.