ಕೌಜಲಗಿ: ಇಲ್ಲಿನ ಮೀರಾಳ ತೋಟದಲ್ಲಿದ್ದ ಬಾಲಕಿಗೆ ಕೋವಿಡ್–19 ದೃಢಪಟ್ಟಿದ್ದರಿಂದಾಗಿ ಆ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ.
‘ಬಾಲಕಿ ಗೋಕಾಕದವಳು. ಪರೀಕ್ಷಾ ವರದಿ ಬರುವ ಪೂರ್ವದಲ್ಲಿ ಆಕೆ ಕೌಜಲಗಿಯಿಂದ 3 ಕಿ.ಮೀ. ದೂರದ ಮೀರಾಳ ತೋಟದ ಸಂಬಂಧಿಕರ ಮನೆಯಲ್ಲಿದ್ದಳು. ಹೀಗಾಗಿ, ಆ ಪ್ರದೇಶದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ’ ಎಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿ ನಾಡಗೌಡರ ತಿಳಿಸಿದರು.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಜುಲೈ 3ರಂದು ಬೆಳಿಗ್ಗೆ 10.30ಕ್ಕೆ ಮುಖಂಡರು, ಜನಪ್ರತಿನಿಧಿಗಳು ಹಾಗೂ ಆರೋಗ್ಯ ಸಿಬ್ಬಂದಿಯ ಸಭೆ ಕರೆದಿದ್ದಾರೆ.