ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಭಾನುವಾರ ಆಚರಿಸಲಾಯಿತು.
ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಪೂಜೆ ಸಲ್ಲಿಸಿದರು.
ಜಿಲ್ಲಾ ಹಣಬರ ಸಂಘದ ಅಧ್ಯಕ್ಷ ಅರವಿಂದ ತೇಣಗಿ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಕೊಡುಗು ಜಿಲ್ಲೆಯ ಜನರು ಸಂಕಷ್ಟದಲ್ಲಿ ಇರುವುದರಿಂದ ಈ ಬಾರಿ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ’ ಎಂದರು.
‘ಜಯಂತಿ ಆಚರಣೆಗೆ ಸರ್ಕಾರದಿಂದ ಜಿಲ್ಲೆಗೆ ಬಿಡುಗಡೆ ಆಗುವ ಒಟ್ಟು ₹ 3 ಲಕ್ಷ ಅನುದಾನವನ್ನು ಕೊಡುಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೆರವಾಗುವುದಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಲಾಗಿದೆ. ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಸಮಾಜದವರು ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಿ ಆದರ್ಶರಾಗಿದ್ದಾರೆ’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಶೀಲ್ದಾರ್ ಮಂಜುಳಾ ನಾಯಕ, ಹಣಬರ ಸಂಘದ ಕಾರ್ಯದರ್ಶಿ ರವಿ ಶಾಸ್ತ್ರಿ, ಸಮಾಜದ ಮುಖಂಡರಾದ ಬಿ.ಆರ್. ಸಂಗಪ್ಪಗೋಳ, ಬಿ.ಎಲ್. ಪಾಟೀಲ, ಸಂಜೀವ ಹಮ್ಮಣ್ಣನವರ, ತಿಪ್ಪಣ್ಣ ಸನದಿ, ಎಂ. ಪಾಟೀಲ, ಆರ್.ಎನ್. ಶಾಸ್ತ್ರಿ ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು.