ಬೆಳಗಾವಿ: ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಯ ಸುಕ್ಷೇತ್ರದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಜೋಗತಿಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಜೈಭೀಮ, ಓಂ ಸಾಯಿ ಯೂನಿಯನ್ ನೇತೃತ್ವದಲ್ಲಿ ಸೇರಿದ ಕೆಲವು ಜೋಗಮ್ಮಗಳು ತಲೆ ಮೇಲೆ ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತುನಿಂತು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ದೇವಸ್ಥಾನದಿಂದ ನಮಗೆ ಯಾವುದೇ ವ್ಯವಸ್ಥೆ ಇಲ್ಲ. ಪ್ರತಿಯೊಂದಕ್ಕೂ ಹೆಚ್ಚು ಹಣ ಪಡೆಯುತ್ತಾರೆ. ದೂರದ ಊರುಗಳಿಂದ ದೇವಿ ದರ್ಶನಕ್ಕೆ ₹10 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಹೋದದರೂ ಅಲ್ಲಿ ಯಾವುದೇ ರೀತಿಯ ವ್ಯವಸ್ಥೆ ಸಿಗುತ್ತಿಲ್ಲ. ತಂಗುವುದಕ್ಕೆ ಬಾಡಿಗೆ ಮನೆ ಸಹಿತ ಕೊಡುತ್ತಿಲ್ಲ. ಇದರಿಂದ ಬಯಲಿನಲ್ಲಿಯೇ ಅಡುಗೆ ಮಾಡಿ ಊಟ ಮಾಡುವುದು ಅನಿವಾರ್ಯವಾಗಿದೆ’ ಎಂದು ದೂರಿದರು.
ದೇವಿ ಸನ್ನಿಧಿಯಲ್ಲಿ ತಂಗಲು ಜಾಗ ಕೂಡದೇ ಇದ್ದರೆ ನಾವು ಜಿಲ್ಲಾಧಿಕಾರಿ ಕಚೇರಿಗೆ ಮುಂದೆಯೇ ‘ಜಗ’ಗಳನ್ನು ಹಾಕಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡ ರಾಜು ತೊಂಬರೆ ಮಾತನಾಡಿ, ‘ಗುಡ್ಡದಲ್ಲಿ ಸ್ವಚ್ಛತೆಯೂ ಇಲ್ಲ. ಸಮರ್ಪಕ ಶೌಚಾಯಲಯ, ಬಾತರೂಮ್ ಇಲ್ಲ. ಭಕ್ತರಿಗೆ ಇರಲು ಸೂಕ್ತ ವಸತಿ ವ್ಯವಸ್ಥೆ ಇಲ್ಲ. ಕುಡಿಯುವ ನೀರು ಕೂಡ ಸರಿಯಾಗಿಲ್ಲ. ವ್ಯಾಪಾರಿಗಳು ಎಲ್ಲವನ್ನೂ ದುಬಾರಿ ಮಾಡಿದ್ದಾರೆ’ಎಂದು ದೂರಿದರು.
‘ದೇವಸ್ಥಾನದ ಅಧಿಕಾರಿ, ಸಿಬ್ಬಂದಿ ತಮಗೆ ಬೇಕಾದವರಿಗೆ ನೇರವಾಗಿ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಆದರೆ ಸಾಮಾನ್ಯ ಜನರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸರದಿಯಲ್ಲಿ ನಿಂತರೂ ದರ್ಶನ ಆಗುತ್ತಿಲ್ಲ’ಎಂದು ಕಿಡಿಕಾರಿದರು.