ಬೆಳಗಾವಿ: ‘ಸಹೋದರ ಲಖನ್ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವುದು ಊಹಾಪೋಹ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಸಬೇಕು ಎನ್ನುವುದು ಬಿಜೆಪಿಯವರಿಗೆ ಬಿಟ್ಟ ವಿಚಾರ. ಯಾವ ಪಕ್ಷದಿಂದ ಕಣಕ್ಕಿಳಿಯಬೇಕು ಎನ್ನುವುದು ಅವರ (ಲಖನ್) ವೈಯಕ್ತಿಕ ವಿಚಾರ. ಚುನಾವಣೆಯಲ್ಲಿ ಸಹೋದರ ಎನ್ನುವ ಪ್ರಶ್ನೆ ಬರುವುದಿಲ್ಲ. ಒಂದು ವೇಳೆ ಅವರು ಬಿಜೆಪಿಯಿಂದ ಕಣಕ್ಕಿಳಿದರೆ ನಾನು ಪಕ್ಷದ (ಕಾಂಗ್ರೆಸ್) ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
3–4ಜನ ರೇಸ್ನಲ್ಲಿ:
‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ 3–4 ಜನ ಆಕಾಂಕ್ಷಿಗಳ ಹೆಸರುಗಳು ಹೈಕಮಾಂಡ್ಗೆ ತಲುಪಿವೆ. ಇವರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಈ ವಾರ ನಿರ್ಧಾರವಾಗಲಿದೆ’ ಎಂದು ಸತೀಶ ಹೇಳಿದರು.
‘ಚುನಾವಣಾ ಕಣಕ್ಕಿಳಿಯಲು ಹಲವರು ಆಸಕ್ತಿ ತೋರಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯಾಗಿದೆ. ದೆಹಲಿಯಲ್ಲಿ ಅಂತಿಮ ಹಂತದ ಚರ್ಚೆ ನಡೆಯಲಿದೆ’ ಎಂದು ನುಡಿದರು.
‘ಶಿವಕಾಂತ ಸಿದ್ನಾಳ, ಡಾ.ವಿ.ಎಸ್. ಸಾಧುನವರ, ಅಂಜಲಿ ನಿಂಬಾಳ್ಕರ, ಚನ್ನರಾಜ ಹಟ್ಟಿಹೊಳಿ ಹೆಸರುಗಳು ಹೈಕಮಾಂಡ್ಗೆ ಹೋಗಿವೆ. ಟಿಕೆಟ್ ಯಾರಿಗೇ ಸಿಕ್ಕರೂ ಅವರನ್ನು ಗೆಲ್ಲಿಸಿಕೊಂಡು ಕಾರ್ಯಕರ್ತರು ಸಿದ್ಧರಿದ್ದಾರೆ’ ಎಂದರು.
‘ಶಾಸಕ, ಸಹೋದರ ರಮೇಶ ಜಾರಕಿಹೊಳಿ ಈಗಲೂ ಪಕ್ಷದಲ್ಲಿ ಇದ್ದಾರೆ. ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.