ಹಂದಿಗುಂದ: ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ಸಹೋದರಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕುಡಚಿ ಮತಕ್ಷೇತ್ರದ ಹಂದಿಗುಂದ, ಕಪ್ಪಲಗುದ್ದಿ ಹಾಗೂ ಪಾಲಭಾಂವಿ ಗ್ರಾಮಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿ ಶುಕ್ರವಾರ ಮತ ಯಾಚಿಸಿದರು.
‘ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವರು ಬಂಡುಕೋರರಾಗಿ ಹೋದರು. ಈಗಲೂ ಸಮಾಧಾನ ಆಗದೆ ಬಿಜೆಪಿಯಲ್ಲೂ ಬಂಡುಕೋರ ನಾಯಕರಾಗಿದ್ದಾರೆ. ಅವರನ್ನು ಅವರ ಪಕ್ಷ ನೋಡಿಕೊಳ್ಳಲಿದೆ. ರಾಮನಾಮ ಜಪಿಸುವ ಪಕ್ಷದ ಅವರು ಶಾಸಕಿಗೆ ಏನೇನೋ ಮಾತನಾಡಿದ್ದಾರೆ’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದರು.
‘ನಮ್ಮ ಅಭ್ಯರ್ಥಿ ಯುವ ಮುಖಂಡ, ಉತ್ಸಾಹಿ. ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಮನೋಭಾವ ಹೊಂದಿದ್ದಾರೆ. ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಕೋರಿದರು.
ಮುಖಂಡ ಡಿ.ಎಸ್. ನಾಯ್ಕ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ಪಾಟೀಲ, ಮಹೇಂದ್ರ ತಮ್ಮನ್ನವರ, ಎಂ.ಎಸ್. ಸಂಗಾಪುರ, ಪರಗೌಡ ಪಾಟೀಲ, ಕುಡಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೇವಣ್ಣ ಇದ್ದರು.