ಬೆಳಗಾವಿ: ‘ಗ್ರಾಮೀಣ ಕ್ಷೇತ್ರದಲ್ಲಿ ಹೋದ ವರ್ಷ ಉಂಟಾದ ಪ್ರವಾಹದ ಪರಿಹಾರವಿನ್ನೂ ಬಾಕಿ ಇರುವಾಗಲೇ ಮತ್ತೆ ನೆರೆ ಬಂದಿದ್ದು, ಹಿಂದಿನ ಬಾಕಿ ಜೊತೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
‘ಕ್ಷೇತ್ರವು ಹೆಚ್ಚಾಗಿ ಕೃಷಿ ಆಧಾರಿತವಾಗಿದ್ದು, ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ಸಣ್ಣ ಕೆರೆ, ಕಟ್ಟೆ, ರಸ್ತೆಗಳು ಸಹ ಹಾಳಾಗಿವೆ. ಜನರ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
‘ಕ್ಷೇತ್ರದಲ್ಲಿ 5ಸಾವಿರಕ್ಕಿಂತಲೂ ಹೆಚ್ಚಿನ ಮನೆಗಳು ಬಿದ್ದಿದ್ದು, ಅದರಲ್ಲಿ ಸಾವಿರ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ. ಸಾವಿರಕ್ಕಿಂತಲೂ ಹೆಚ್ಚಿನ ಮಂದಿಗೆ ಪರಿಹಾರ ಒದಗಿಸುವಂತೆ ಸಲ್ಲಿಸಿದ ಮನವಿಗೆ ಈವರೆಗೂ ಸ್ಪಂದನೆ ಸಿಕ್ಕಿಲ್ಲ. ಭೇಂಡಿಗೇರಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಇಂಗು ಕೆರೆಯು ಸುಮಾರು 10 ಮೀಟರ್ ಕುಸಿದಿದೆ. ಕೆರೆಯ ಏರಿ ಮರು ನಿರ್ಮಾಣ ಮಾಡಲು ₹ 40 ಲಕ್ಷ ಅಗತ್ಯವಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗೆ ಶೀಘ್ರವೇ ಅನುದಾನ ಮಂಜೂರು ಮಾಡಬೇಕು’ ಎಂದು ಕೋರಿದ್ದಾರೆ.
‘ಅಂಬೇವಾಡಿ, ಹಂಗರಗಾ ಹಾಗೂ ಸಂತಿಬಸ್ತವಾಡ ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಬೆಳೆಗಳು ಹಾಳಾಗಿವೆ. ಹೀಗಾಗಿ, ಈ ಗ್ರಾಮಗಳಿಗೆ ವಿಶೇಷ ಅನುದಾನ ಒದಗಿಸಬೇಕು’ ಎಂದು ಬೇಡಿಕೆ ಸಲ್ಲಿಸಿದ್ದಾರೆ.