ಬೆಳಗಾವಿ:‘ಲಕ್ಷ್ಮಿ ಹೆಬ್ಬಾಳಕರ ಔಟ್ ಆಫ್ ಮೈಂಡ್ ಆಗಿದ್ದಾರೆ’ ಎಂಬ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಶಾಸಕಿಯೂ ಆಗಿರುವ ಕೆಪಿಸಿಸಿ ವಕ್ತಾರೆ ಲಕ್ಷ್ಮಿ ಹೆಬ್ಬಾಳಕರ ಹೀಗೆ ತಿರುಗೇಟು ನೀಡಿದ್ದಾರೆ
ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಮನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲಿದ್ದುಕೊಂಡು ಆ ನಾಯಕ ಮಹಿಳೆಗೆ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಜನರು ಗಮನಿಸುತ್ತಿದ್ದಾರೆ. ಅಂತಹ ಹೇಳಿಕೆಗಳು ಸಚಿವರಿಗೆ ಶೋಭೆ ತರುವುದಿಲ್ಲ. ಜನರಿಗೆ ಇದೆಲ್ಲವೂ ಅರ್ಥವಾಗುತ್ತದೆ’ ಎಂದರು.
‘ಗೋಕಾಕದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಜನರು ಆಹ್ವಾನಿಸುತ್ತಿದ್ದಾರೆ. ಪಕ್ಷ ಕೂಡ ಈ ಬಾರಿ ಸಂಪೂರ್ಣವಾಗಿ ನನಗೇ ಜವಾಬ್ದಾರಿ ಕೊಟ್ಟಿದೆ. ಹೈಕಮಾಂಡ್ ಬಯಸಿದರೆ ಅಲ್ಲಿಂದ ಸ್ಪರ್ಧೆ ಖಚಿತ. ಎಲ್ಲದಕ್ಕೂ ಸಿದ್ಧವಾಗಿದ್ದೇನೆ’ ಎಂದು ತಿಳಿಸಿದರು.
‘ನಾನು ಗ್ರಾಮೀಣ ಕ್ಷೇತ್ರದ ಮನೆ ಮಗಳು. ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿರುತ್ತೇನೆ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನನಗೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ನನಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯಕ್ಕೆ ಬದ್ಧಳಾಗಿರುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ಜಿಲ್ಲೆಯಲ್ಲಿ 18 ಕ್ಷೇತ್ರಗಳಿವೆ. ಆದರೆ, ಬಿಜೆಪಿಯವರು ನನ್ನ ಕ್ಷೇತ್ರದ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಅದನ್ನು ನಿಭಾಯಿಸುವ ಶಕ್ತಿ ನನಗಿದೆ. ಉಸ್ತುವಾರಿ ಸಚಿವರು ಪಿಡಿಒಗಳ ಮಟ್ಟಿಗೆ ಇಳಿದು ರಾಜಕಾರಣ ಮಾಡುವ ಅಗತ್ಯವಿರಲಿಲ್ಲ’ ಎಂದು ಟೀಕಿಸಿದದರು.
‘ನಾನು ರಾಮನ ಭಕ್ತೆ. ಶ್ರೀರಾಮಮಂದಿರ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹ 2 ಲಕ್ಷ ದೇಣಿಗೆ ನೀಡಿ ಭಕ್ತಿ ತೋರಿಸಿದ್ದೇನಿ. ಪಕ್ಷದ ಬಹಳಷ್ಟು ಮಂದಿ ದೇಣಿಗೆ ಕೊಟ್ಟಿದ್ದಾರೆ. ರಾಮ ರಾಜ್ಯದ ಕನಸು ಕಂಡವರಲ್ಲಿ ನಾವೂ ಇದ್ದೇವೆ’ ಎಂದರು.
‘ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮಿ ಗೆಲ್ಲಿಸಿದ್ದು ನಾನೇ’ ಎಂಬ ರಮೇಶ ಹೇಳಿಕೆಗೆ, ‘ಹೈಕಮಾಂಡ್ ಬಳಿ ಹೇಳಿ ಅವರನ್ನು ನಾನೇ ಮಂತ್ರಿ ಮಾಡಿಸಿದ್ದು ಎನ್ನುತ್ತೇನೆ. ನಾನು ಹೇಳಿರುವ ಈ ಮಾತಿಗೂ ಮತ್ತು ಅವರ ಹೇಳಿಕೆಗೂ ಪ್ರಾಮುಖ್ಯತೆ ಕೊಡಬಾರದು. ನಾನು ನಾನು ಎಂದ ಬಹಳಷ್ಟು ರಾಜರು ಮಣ್ಣಾಗಿ ಹೋಗಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದು ಮತದಾರರು. ವಿರೋಧಿಗಳು ವಿರೋಧಿಸಿದಷ್ಟೂ ನಾನು ಗಟ್ಟಿ ಆಗುತ್ತೇನೆ’ ಎಂದು ಟಾಂಗ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.