ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಪ್ರಭಾ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ

Last Updated 10 ಮಾರ್ಚ್ 2021, 6:31 IST
ಅಕ್ಷರ ಗಾತ್ರ

ಘಟಪ್ರಭಾ (ಬೆಳಗಾವಿ ಜಿಲ್ಲೆ): ಸಮೀಪದ ಗೋಕಾಕ ಫಾಲ್ಸ್‌ನ ಗೋಕಾಕ ಜವಳಿ ಮಿಲ್‌ ಬಳಿಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ (ತಟಾಕೇಶ್ವರ) ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ.

ರಟ್ಟರ ಕಾಲದಲ್ಲಿ 1153ರಲ್ಲಿ ನಿರ್ಮಿತವಾದ ಈ ದೇವಸ್ಥಾನದ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಸುತ್ತ ಹಚ್ಚ ಹಸಿರಿನ ನಿಸರ್ಗ ತಾಣದ ಮಧ್ಯೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ ವೈಭವ ಸೃಷ್ಟಿಸುವ ತಾಣದ ದಂಡೆಯಲ್ಲೇ ಈ ದೇಗುಲವಿದೆ. ಜಲಪಾತಕ್ಕೆ ಭೇಟಿ ನೀಡುವ ಬಹುತೇಕರು ಮಹಾಲಿಂಗೇಶ್ವರನಿಗೂ ನಮಿಸುತ್ತಾರೆ.

ಬ್ರಿಟಿಷರ ಆಳ್ವಿಕೆಯಿಂದಲೂ ಜವಳಿ ಕಾರ್ಖಾನೆಯ ಕಾರ್ಮಿಕರು ಇಲ್ಲಿ ಸಂಭ್ರಮ ಹಾಗೂ ಸೌಹಾರ್ದದಿಂದ ಗ್ರಾಮದೇವರಾದ ಮಹಾಲಿಂಗೇಶ್ವರನ ಸೇವೆಗೆ ಅಣಿಯಾಗುವ ಸಂದರ್ಭವೇ ಈ ಜಾತ್ರಾ ಮಹೋತ್ಸವ. ದೇವಸ್ಥಾನಕ್ಕೆ ಜನಪ್ರತಿನಿಧಿಗಳು, ಸುತ್ತಲಿನ ಎಲ್ಲ ಗ್ರಾಮದವರು ಸಹಾಯ ನೀಡುತ್ತ ಬಂದಿದ್ದಾರೆ. ಮಹಾಶಿವರಾತ್ರಿ ದಿನದಂದು ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

‘ಕೋವಿಡ್–19 ಕಾರಣದಿಂದ, ಅಧಿಕಾರಿಗಳ ನಿರ್ದೇಶನದಂತೆ ಅಂತರ ಕಾಯ್ದುಕೊಂಡು ಜಾತ್ರಾ ಮಹೋತ್ಸವ ಆಚರಿಸಲಾಗುವುದು’ ಎಂದು ಸಮಿತಿ ತಿಳಿಸಿದೆ.

ಬುಧವಾರದಿಂದಲೇ ಶಿವರಾತ್ರಿ ಕಾರ್ಯಕ್ರಮ, ಜಾತ್ರಾ ಮಹೋತ್ಸವ ಚಾಲನೆಗೊಂಡಿದೆ. ಗುರುವಾರ (ಮಾರ್ಚ್‌ 11) ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪೂಜಾ ನೈವೇದ್ಯ ಹಾಗೂ ಭಜನೆ ನಡೆಯಲಿದೆ. ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 4.30ಕ್ಕೆ ರಥೋತ್ಸವ ನಡೆಯಲಿದೆ. ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ವಾದ್ಯ ಮೇಳ ಹಾಗೂ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿರುವ ಈ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಗೋಕಾಕ ಮಿಲ್‌ ವ್ಯವಸ್ಥಾಪಕ ನಿರ್ದೇಶಕ, ಮುಖ್ಯಕಾರ್ಯಕಾರಿ ಅಧಿಕಾರಿ ರಮೇಶ ಆರ್. ಪಾಟೀಲ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಗೋಕಾಕ ಮಿಲ್‌ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶರದ ದೇಶಪಾಂಡೆ, ಸಹಾಯಕ ವ್ಯವಸ್ಥಾಪಕ ಚಿದಂಬರ ಕುಲಕರ್ಣಿ, ಡಿವೈಎಸ್ಪಿ ಜಾವೇದ ಇನಾಮದಾರ, ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐ ಎ.ಪಿ. ಅಮ್ಮಿನಭಾವಿ, ಪಿಎಸ್‌ಐ ಕೆ.ಬಿ. ವಾಲೀಕಾರ ಪಾಲ್ಗೊಳ್ಳಲಿದ್ದಾರೆ.

12ರಂದು ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಅಂಬಲಿ ಕೊಡಗಳ ಆಗಮನದ ನಂತರ 11ಕ್ಕೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಪ್ರಸಾದ ವಿತರಣೆಗೆ ವಿಶಾಲವಾದ ಪ್ರಾಂಗಣದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಎಲ್ಲರೂ ಮಾಸ್ಕ್‌ ಧರಿಸಿ ಹಾಗೂ ಅಂತರ ಕಾಯ್ದುಕೊಂಡು ಪಾಲ್ಗೊಂಡು ಸಹಕರಿಸಬೇಕು ಎಂದು ಜಾತ್ರಾ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT