ಬೆಳಗಾವಿ: ‘ಯೋಗಿ ವೇಮನರು ತಮಗಾಗಿ ಬದುಕಿದವರಲ್ಲ. ಅವರು ಸಮಾಜದ ಒಳಿತಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರು’ ಎಂದು ಡಾ.ಕೃಷ್ಣಾನಂದ ಶರಣರು ಸ್ಮರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಸದಾಶಿವನಗರದ ರೆಡ್ಡಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾಯೋಗಿ ವೇಮನರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ರೆಡ್ಡಿ ಸಮಾಜದ ಒಂದು ಏಳಿಗೆಗೆ ಕಾರಣರಾದವರು ಮಹಾಯೋಗಿ ಅವರು. ಆ ಮಹಾತ್ಮರ ಜಯಂತಿಯನ್ನು ಕರ್ನಾಟಕದ ಜೊತೆಗೆ ಆಂಧ್ರ ಮತ್ತು ತೆಲಂಗಾಣದಲ್ಲೂ ಆಚರಿಸಲಾಗುತ್ತದೆ. ವೇಮನಾರು ಆ ಕಾಲದಲ್ಲಿಯೇ ಧಾರ್ಮಿಕ ದೌರ್ಜನ್ಯದ ವಿರುದ್ಧ ಹೋರಾಡಿದವರು ಹಾಗೂ ರೆಡ್ಡಿ ಜನಾಂಗದ ಒಗ್ಗಟ್ಟಾಗಿ ಶ್ರಮಿಸಿದವರು. ಸಮಾಜದಲ್ಲಿರುವ ಅಸಮಾನತೆ ತೊಡೆದು ರೆಡ್ಡಿ ಸಮಾಜವನ್ನು ಕೂಡಿಸುವ ಕೆಲಸವನ್ನು ಮಾಡಿದ್ದಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೋಡಿ, ಬೆಳಗಾವಿ ರೆಡ್ಡಿ ಸಂಘದ ಗೌರವಾಧ್ಯಕ್ಷೆ ಇಂದಿರಾಬಾಯಿ ಭೀಮರೆಡ್ಡಿ ಮಳಲಿ, ಉಪಾಧ್ಯಕ್ಷ ಬಿ.ಎನ್. ನಾಡಗೌಡ ಇದ್ದರು.
ಸುರೇಶ ಚಂದರಗಿ ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು.