ಬೆಳಗಾವಿ: ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಶಿವಾಪುರ ಗ್ರಾಮದ ಮನೆಯೊಂದರಲ್ಲಿ ಭಾನುವಾರ ಮಲಗಿದ ರೀತಿಯಲ್ಲೇ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.
ಮೃತರನ್ನು ಶಿವಾಪುರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂದು ಗುರುತಿಸಲಾಗಿದೆ. ಅಂದಾಜು 9 ತಿಂಗಳ ಹಿಂದೆಯೇ ಅವರು ಮಲಗಿದ್ದಾಗ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬುದ್ಧಿಮಾಂದ್ಯರಾಗಿದ್ದ ಪ್ರಕಾಶ ಈ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಹಳೇ ಕಟ್ಟಡದಲ್ಲಿ ಏಕಾಂಗಿ, ಬಾಗಿಲ ಒಳಗಿನಿಂದ ಕೀಲಿ ಹಾಕಿಕೊಂಡು ಇರುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪ್ರಕಾಶ ಅವರ ತಂದೆ- ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಒಬ್ಬ ಕಿರಿಯ ಸಹೋದರ ಇದ್ದು, ವರ್ಷದ ಹಿಂದೆ ಅವರೂ ಊರು ಬಿಟ್ಟು ಧಾರವಾಡ ಜಿಲ್ಲೆಯ ಕಲಘಟಗಿಗೆ ಹೋಗಿದ್ದಾರೆ. ಆಗಿನಿಂದ ಪ್ರಕಾಶ ಒಬ್ಬರೇ ಇರುತ್ತಿದ್ದರು.
ಪದವೀಧರ ಆಗಿರುವ ಪ್ರಕಾಶ ಹೆಚ್ಚಾಗಿ ಊರಿನ ಜನರೊಂದಿಗೆ ಬೆಳೆಯುತ್ತಿರಲಿಲ್ಲ. ಅವರ ತಮ್ಮ ಊರಿಗೆ ಹೋದ ಮೇಲೆ ಏಕಾಂಗಿ ಆಗಿ ಮನೆಯೊಳಗೇ ಇರುತ್ತಿದ್ದರು. ಅಕ್ಕಪಕ್ಕದ ಮನೆಯವರು ಆಗಾಗ ತಿನ್ನಲು ಏನನ್ನಾದರೂ ಕೊಡುತ್ತಿದ್ದರು. ಇಲ್ಲದಿದ್ದರೆ ಉಪವಾಸ ಮಲಗುತ್ತಿದ್ದರು ಎಂದು ಜನ ಮಾಹಿತಿ ನೀಡಿದರು.
ಮುರಗೋಡ ಸಿಪಿಐ ಮೌನೇಶ್ವರ ಮಾಲಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಯಾಗಿದೆಯೋ? ಕಾಯಿಲೆಯಿಂದ ಸಾವನ್ನಪ್ಪಿದ್ದಾರೋ? ಅಥವಾ ಹಸಿವಿನಿಂದ ಮೃತಪಟ್ಟಿದ್ದಾರೋ ಎಂಬುವುದನ್ನು ತನಿಖೆಯಿಂದ ಪತ್ತೆ ಹಚ್ಚಬೇಕಿದೆ ಎಂದು ಅವರು ತಿಳಿಸಿದ್ದಾರೆ.