ಚಿಕ್ಕೋಡಿ: ಪತ್ನಿ ಕೊಲೆ ಮಾಡಿದ್ದ ಇಲ್ಲಿನ ಸಂಜಯ ಗಾಂಧಿ ನಗರದ ನಿವಾಸಿ ಅಜೀತ್ ಉರೂಫ್ ಸಾವಳಾ ಮಹಾದೇವ ಮಾಳಿ ಎಂಬಾತನಿಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಿವಾವಧಿ ಶಿಕ್ಷೆ ಹಾಗೂ ₹ 2,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಈ ವ್ಯಕ್ತಿ ನಿರುದ್ಯೋಗಿ ಆಗಿದ್ದು ಪ್ರತಿನಿತ್ಯ ತನ್ನ ಪತ್ನಿ ಪಾರ್ವತಿ ಬಳಿ ಖರ್ಚಿಗೆ ಹಣ ಕೇಳುತ್ತಿದ್ದ. ಕೊಡದೇ ಇದ್ದಾಗ ಪೀಡಿಸುತ್ತಿದ್ದ. 2016ರ ನವೆಂಬರ್ 4ರಂದು ಹಣ ನೀಡುವಂತೆ ತನ್ನ ಹೆಂಡತಿ ಜೊತೆ ಜಗಳ ಮಾಡಿದ್ದ. ಹಣವಿಲ್ಲ ಎಂದು ಪತ್ನಿ ಹೇಳಿದಾಗ ಪತ್ನಿಯನ್ನು ಕೊಡಲಿಯಿಂದ ತಲೆಗೆ ಹಾಗೂ ಕುತ್ತಿಗೆ ಹೊಡೆದು ಕೊಲೆ ಮಾಡಿದ್ದ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಆಗಿದ್ದ ಮಲ್ಲನಗೌಡ ನಾಯ್ಕರ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶರಾದ ಎಸ್.ಎಲ್.ಚವ್ಹಾಣ ಅವರು ಸೋಮವಾರ ಶಿಕ್ಷೆ ನೀಡಿದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈ.ಜಿ.ತುಂಗಳ ವಾದ ಮಂಡಿಸಿದ್ದರು.