ಗೋಕಾಕ: ಬುದ್ಧಿ ಮಾತು ಹೇಳಿದ ಸಹೋದರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಗರದ ಕಿಲ್ಲೆಯ ಮನೆಯೊಂದರಲ್ಲಿ ನಡೆದಿದೆ. ಮುನಾಫ್ ರಫೀಕ್ ದೇಸಾಯಿ (24) ಕೊಲೆಯಾದವರು. ಮುನಾಫ್ ಅವರ ಹಿರಿಯ ಸಹೋದರ ರಮಜಾನ್ ರಫೀಕ್ ದೇಸಾಯಿ ಆರೋಪಿ.
ಕುಟುಂಬದ ಸದಸ್ಯರೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ‘ನನಗಿಂತ ಕಿರಿಯ ನೀನು ನನಗೇ ಬುದ್ಧಿ ಹೇಳುವೆಯಾ‘ ಎಂದು ಜಗಳ ತೆಗೆದಿದ್ದಾನೆ, ಇದು ವಿಕೋಪಕ್ಕೆ ಹೋದಾಗ ಇರಿದಿದ್ದಾನೆ ಎನ್ನಲಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.